ಬಿಡದಿ: ಹೋಬಳಿಯಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದಿದ್ದ ಬೇಬಿ ಕಾರ್ನ್ ಫಸಲು ನೆಲಕಚ್ಚಿದೆ. ಬಾಳೆ, ಮಾವು, ತರಕಾರಿ ಬೆಳೆಗಳಿಗೂ ಹಾನಿಯಾಗಿದೆ.
ತರಕಾರಿ ಬೆಳೆಯಲು ಅಂದರಹಳ್ಳಿ ಸಮೀಪ ರೈತ ಕಾರ್ತಿಕ್ ಸುಮಾರು ₹ 3 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಗ್ರೀನ್ ಹೌಸ್ ಬಿರುಗಾಳಿಗೆ ಸಿಲುಕಿಗೆ ಹಾನಿಗೀಡಾಗಿದೆ. ಇದರಿಂದ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
‘ಈಗ ಕೊರೊನಾ ಸೋಂಕು ಉಲ್ಬಣಿಸಿದೆ. ಬೆಳೆದ ಬೆಳೆಗಳು ಕೂಡ ಕೈಸೇರದೆ ನಷ್ಟ ಅನುಭವಿಸುವಂತಾಗಿದೆ. ಒಳ್ಳೆಯ ಬೆಳೆ ಬಂದಾಗ ಉತ್ತಮ ಬೆಲೆ ಇಲ್ಲದೆ ತೊಂದರೆ ಅನುಭವಿಸುತ್ತೇವೆ. ಕೋವಿಡ್ ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಮತ್ತಷ್ಟು ನಷ್ಟ ಅನುಭವಿಸುವುದು ಗ್ಯಾರಂಟಿ’ ಎಂದು ರೈತ ಕಾರ್ತಿಕ್ ಅಳಲು ತೋಡಿಕೊಂಡರು.
ಹೋಬಳಿಯಾದ್ಯಂತ ಮಳೆ ಮುಂದುವರಿದಿದೆ. ಗುಡುಗು ಸಹಿತ ಬಾರಿ ಮಳೆ ಬೀಳುತ್ತಿದೆ. ರೈತರ ಮುಖದಲ್ಲಿ ಹರ್ಷ ಮೂಡಿದೆ. ಮತ್ತೊಂದೆಡೆ ಬೆಳೆ ನಷ್ಟಕ್ಕೀಡಾದ ರೈತರ ಮೊಗದಲ್ಲಿ ನೋವು ಇಣುಕಿದೆ. ಇನ್ನೊಂದೆಡೆ ರೈತರ ಹೊಲಗಳಲ್ಲಿನ ಚೆಕ್ ಡ್ಯಾಂಗಳಲ್ಲಿ ನೀರು ಶೇಖರಣೆಯಾಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಬಹುದು ಎಂಬ ಸಂತಸ ರೈತ ಸಮುದಾಯದಲ್ಲಿದೆ.
ಮಳೆ ಹೀಗೆಯೇ ಮುಂದುವರಿದರೆ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಲಿದೆ. ಇದರಿಂದ ದನ, ಕರುಗಳಿಗೆ ಕುಡಿಯಲು ನೀರು ಸಿಗಲಿದೆ. ಕಾಡು ಪ್ರಾಣಿಗಳಿಗೂ ನೀರಿಗೆ ಹಾಹಾಕಾರ ತಪ್ಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.