ADVERTISEMENT

ಅಪ್ಪುಗೆ ಬಿರಿಯಾನಿ ನೈವೇದ್ಯ ಅರ್ಪಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 7:20 IST
Last Updated 8 ನವೆಂಬರ್ 2021, 7:20 IST
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು   

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಹಾಗೂ ಪುನೀತ್ ಅಭಿಮಾನಿಗಳು ಭಾನುವಾರ ನಟ ಪುನೀತ್ ನಿಧನಕ್ಕೆ ಸಂತಾಪ ಸಭೆ ಏರ್ಪಡಿಸಿದ್ದರು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಜೊತೆಗೆ ಅವರ ನೆಚ್ಚಿನ ಬಿರಿಯಾನಿಯನ್ನು ಎಡೆ ಇಟ್ಟು ಅಭಿಮಾನ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.

ಊರ ಮುಂಭಾಗ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಿರಿಯಾನಿ, ನಾಟಿಕೋಳಿ ಸಾರು ನೈವೇದ್ಯವಿಟ್ಟು ನಮನ ಸಲ್ಲಿಸಿದರು.

ಊರಿನ ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೆ ಅಪ್ಪುವಿಗೆ ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ಅಭಿಮಾನಿಗಳು ಒಗ್ಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಜನರಿಗೆ ಬಿರಿಯಾನಿ ತಯಾರಿಸಿ ವಿತರಿಸಲಾಯಿತು.

ADVERTISEMENT

ಈ ವೇಳೆ ಪುನೀತ್ ಅಪ್ಪಟ ಅಭಿಮಾನಿ ಬಾಬು ಎಂಬಾತ ಕೇಶಮಂಡನ ಮಾಡಿಸಿಕೊಂಡು ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು. ಗ್ರಾಮದ ಹಲವು ಮಹಿಳೆಯರು ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಂಬನಿ ಮಿಡಿದರು.

ಕನ್ನಡ ಚಿತ್ರರಂಗದ ನಟ ಎನ್ನುವುದಕ್ಕಿಂತ ಓರ್ವ ಸಾಮಾಜಿಕ ಕಳಕಳಿಯ ಜೀವವನ್ನು ನಮ್ಮ ನಾಡು ಕಳೆದುಕೊಂಡಿದೆ. ವರನಟ ಡಾ.ರಾಜ್‌ಕುಮಾರ್ ತದನಂತರ ಅವರ ಸ್ಥಾನವನ್ನು ಅಪ್ಪುತುಂಬಿದ್ದರು. ಅವರ ಸಾವು ಇಡೀ ಗ್ರಾಮಸ್ಥರಿಗೆ ಅಪಾರವಾದ ನೋವುಂಟು ಮಾಡಿದೆ. ಅವರ ಪ್ರತಿವರ್ಷದ ಪುಣ್ಯಸ್ಮರಣೆಯನ್ನು ಗ್ರಾಮದಲ್ಲಿ ತಪ್ಪದೇ ನಡೆಸುತ್ತೇವೆ. ಮನೆ ಮಗನನ್ನು ಕಳೆದುಕೊಂಡಷ್ಟು ನೋವುಂಟಾಗಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.