
ಕುದೂರು: ಗ್ರಾಮ ಪಂಚಾಯಿತಿಯಿಂದ ಸರ್ಕಾರದ ಹಂತದವರೆಗೂ ಜನಸ್ನೇಹಿ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಬಡವರ ಕಲ್ಯಾಣ, ರೈತರ ಅಭಿವೃದ್ದಿಗೆ ಸರ್ಕಾರ ಒತ್ತು ನೀಡಲಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಮಂಜೂರಾದ ಜಮೀನುಗಳಿಗೆ ಇನ್ನೊಂದು ವರ್ಷದೊಳಗೆ ಸಂಪೂರ್ಣ ದಾಖಲೆ ಒದಗಿಸಲಾಗುವುದು ಎಂದರು.
ನರೇಗಾ ಯೋಜನೆ ಪಿಡಿಒ, ಕಾರ್ಯದರ್ಶಿಗಳು ಐಎಎಸ್, ಕೆಎಎಸ್ ಅಧಿಕಾರಿಗಳ ರೀತಿಯಾಗಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ. ಕಂಪ್ಯೂಟರ್ ಆಪರೇಟರ್ಗಳು, ಎಂಜಿನಿಯರ್ಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಆರೋಪ ಸಾಬೀತುಗೊಂಡರೆ ವಜಾಗೊಳಿಸುವಂತೆ ಸಿಇಒ, ಇಒಗೆ ಸೂಚಿಸಲಾಗಿದೆ ಎಂದರು.
6 ಸಾವಿರ ಬಸ್ ಖರೀದಿಸಿ 10 ಸಾವಿರ ಡ್ರೈವರ್ ಕಂಡಕ್ಟರ್ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಡಿಸೆಂಬರ್ ಎರಡನೇ ವಾರ ಜಿಲ್ಲೆಗೆ 20 ಬಸ್ ಒದಗಿಸಲಾಗುವುದು ಎಂದು ಹೇಳಿದರು.
ತಾಲ್ಲೂಕಿನಲ್ಲಿ 7 ಪವರ್ ಸ್ಟೆಷನ್ ಬಳಿ ಸೋಲಾರ್ ಪಾರ್ಕ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಇನ್ನೆರಡು ವರ್ಷದಲ್ಲಿ ಶಾಶ್ವತ ವಿದ್ಯುತ್ ರೈತರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಚ್.ಸಿ.ಬಾಲಕೃಷ್ಣ, ಜಿ.ಪಂ ಮಾಜಿ ಅಧ್ಯಕ್ಷ ಧನಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ದಿಶಾ ಸಮಿತಿ ಜೆ.ಪಿ ಚಂದ್ರೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಶಿವರಾಜು, ಅಧ್ಯಕ್ಷ ದಕ್ಷಿಣಾಮೂರ್ತಿ, ಭವ್ಯ, ಉಪಾಧ್ಯಕ್ಷರಾದ ರೇಖಾ, ಶಿವಪ್ರಸಾದ್, ತಹಶೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಇಒ ಚಂದ್ರು, ಮಂಜುನಾಥ್, ಚೈತ್ರಾ, ಚಿಗಳೂರು ಗಂಗಾಧರ್, ಸಿಂಗ್ರಿಗೌಡ ಇದ್ದರು.
ಏತ ನೀರಾವರಿಗೆ ಒತ್ತು
ಶ್ರೀರಂಗ ಏತ ನೀರಾವರಿಯ ಲಿಂಕ್ ಕ್ಯಾನಲ್ಗೆ ಮಂಜೂರಾತಿ ನೀಡಿ ಟೆಂಡರ್ ಕರೆಯಲಾಗುವುದು. ಮಂಚನಬೆಲೆ ವೈ.ಜಿಗುಡ್ಡದಿಂದ ಕುಡಿಯುವ ನೀರು ಒದಗಿಸಲಾಗುವುದು ಎಂದರು. ಚಿಕ್ಕಹಳ್ಳಿ ಗ್ರಾ.ಪಂ ವ್ಯಾಪ್ತಿಯ 65 ಮಂದಿಗೆ ಸಂಸದ ಶಾಸಕರು ಹಕ್ಕುಪತ್ರ ವಿತರಿಸಿದರು. ಹಕ್ಕುಪತ್ರ ರಸ್ತೆ ಖಾತೆ ಸ್ಮಶಾನಕ್ಕೆ ಜಾಗ ಒತ್ತುವರಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.