
ರಾಮನಗರ: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗುತ್ತಾರೆ. ಅವರನ್ನ ಸಿ.ಎಂ ಆಗಿ ನೋಡಬೇಕು ಎಂಬ ನಮ್ಮ ನಿರೀಕ್ಷೆ ಇದೇ ಅವಧಿಯಲ್ಲಿ ಈಡೇರಲಿದೆ’ ಎಂದು ಡಿಸಿಎಂ ಆಪ್ತ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
‘ಐದು ವರ್ಷ ನಮ್ಮ ತಂದೆಯವರೇ ಮುಖ್ಯಮಂತ್ರಿ. ಅದಕ್ಕೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಅವರು ಏನು ಹೇಳಿದ್ದಾರೊ ಗೊತ್ತಿಲ್ಲ. ಆದರೆ, ನಮ್ಮ ನಾಯಕ ಸಿ.ಎಂ ಆಗುತ್ತಾರೆಂಬ ನನ್ನ ಮಾತಿಗೆ ಯಾವಾಗಲೂ ಬದ್ಧ’ ಎಂದರು.
‘ಡಿಕೆಶಿ ಯಾವಾಗ ಸಿ.ಎಂ ಆಗುತ್ತಾರೆ ಎಂಬುದರ ಕುರಿತು ಹಿಂದೆ ನಾನು ಎರಡು ದಿನಾಂಕ ಹೇಳಿದ್ದೆ. ಅವೆರಡೂ ಫೇಲ್ ಆಗಿದ್ದವು. ಆದರೆ, ಮೂರನೇ ಡೇಟ್ ಫೇಲ್ ಆಗುವ ತರ ಇರುವುದಿಲ್ಲ. ಶೀಘ್ರದಲ್ಲೇ ಆ ದಿನಾಂಕ ಹೇಳ್ತಿನಿ’ ಎಂದು ಹೇಳಿದರು.
‘ಶಿವಕುಮಾರ್ ಅವರ ಹೋರಾಟ ಮತ್ತು ಶ್ರಮದಿಂದ ರಾಜ್ಯದಲ್ಲಿ ಕಾಂಗ್ರೆಸ ಸರ್ಕಾರ ಬಂದಿದೆ. ಮುಂದಿನ ಚುನಾವಣೆಗೂ ಅವರ ನೇತೃತ್ವದ ಅಗತ್ಯವಿದೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಅಗತ್ಯವಿದೆ. ಈ ಬಗ್ಗೆ ಶಾಸಕರೆಲ್ಲರೂ ಚರ್ಚಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.