ADVERTISEMENT

ಮಾಧ್ಯಮದವರೆದುರು ನಾಟಕ‌ ಮಾಡಬೇಡಿ; ಅಳಲು ತೋಡಿಕೊಂಡ ಮಹಿಳೆಯರನ್ನು ಗದರಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 11:57 IST
Last Updated 16 ಆಗಸ್ಟ್ 2021, 11:57 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ    

ರಾಮನಗರ: ಕೊಳೆಗೇರಿ ಅಭಿವೃದ್ದಿ ಮಂಡಳಿಯಿಂದ ನಿರ್ಮಾಣ ಆಗುತ್ತಿರುವ ಮನೆಗಳ ಶಂಕುಸ್ಥಾಪನೆಗೆ ಬಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎದುರು ಇಬ್ಬರು ಮಹಿಳೆಯರು ಕೂಗಾಡುತ್ತ ಅಳಲು ತೋಡಿಕೊಂಡ ಘಟನೆ ರಾಮನಗರದ ಕೊತ್ತಿಪುರ ಗ್ರಾಮದಲ್ಲಿ ಸೋಮವಾರ ನಡೆಯಿತು. ಇದರಿಂದ ಸಿಟ್ಟಾದ ಕುಮಾರಸ್ವಾಮಿ 'ಮಾಧ್ಯಮದವರ ಮುಂದೆ ಕೂಗಾಡಿ ನಾಟಕ‌ ಮಾಡಬೇಡಿ' ಎಂದು ಮಹಿಳೆಯರನ್ನು ಗದರಿದರು.

ವಸತಿರಹಿತ ಬಡಜನರಿಗೆ‌ ಮನೆ ನಿರ್ಮಿಸಿಕೊಡಲು ಇಲ್ಲಿ 2010ರಲ್ಲಿ ಜಮೀನನ್ನು ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಅಂದಿನ ಮಾರುಕಟ್ಟೆ ದರದಂತೆ ಪರಿಹಾರವನ್ನು ನೀಡಲಾಗಿತ್ತು. ಆದರೆ ಪರಿಹಾರ ನೀಡಿಕೆಯಲ್ಲಿ ಅನ್ಯಾಯ‌ ಆಗಿದೆ ಎಂದು ಆರೋಪಿಸಿದ ಇಬ್ಬರು‌ ಮಹಿಳೆಯರು, ಶಂಕುಸ್ಥಾಪನೆ ಕಾರ್ಯಕ್ರಮದ ಸಂದರ್ಭ ಕೂಗಾಡುತ್ತ ಗಮನ ಸೆಳೆಯಲು ಪ್ರಯತ್ನಿಸಿದರು.

ಇದರಿಂದ ಅಸಮಾಧಾನಗೊಂಡ ಕುಮಾರಸ್ವಾಮಿ 'ಅಂದು ನಿಮ್ಮ ತಂದೆ ಜಮೀನನ್ನು ಬರೆದುಕೊಟ್ಟಾಗ ನೀವು ಎಲ್ಲಿ ಹೋಗಿದ್ದೀರಿ' ಎಂದು ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡರು. ಅನ್ಯಾಯ ಆಗಿದ್ದರೆ ದಾಖಲೆ ಸಮೇತ ಬನ್ನಿ. ನ್ಯಾಯ ಕೊಡಿಸುತ್ತೇನೆ. ಆದರೆ ಸುಮ್ಮನೆ ಕೂಗಾಡಬೇಡಿ ಎಂದು ಮಹಿಳೆಯರನ್ನು ಕಳುಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.