ಕನಕಪುರ: ಕೇಂದ್ರ ಸರ್ಕಾರವು ಎಲ್ಐಸಿ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಚಿಂತನೆ ನಡೆಸಿರುವುದನ್ನು ವಿರೋಧಿಸಿ ಕನಕಪುರ ಎಲ್ಐಸಿ ಶಾಖೆಯ ಅಧಿಕಾರಿಗಳು, ನೌಕರರು ಹಾಗೂ ವಿಮಾಪ್ರತಿನಿಧಿಗಳು ಕಚೇರಿ ಮುಂದೆ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಮಾತನಾಡಿ, ‘ಎಲ್ಐಸಿ ಸಂಸ್ಥೆಯು 1956 ರಲ್ಲಿ ಪ್ರಾರಂಭಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಸಂಸ್ಥೆಯು ಸಾರ್ವಜನಿಕವಾಗಿ ಅತ್ಯಂತ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂದು ಹೆಸರು ಗಳಿಸಿದೆ’ ಎಂದರು.
ಸರ್ಕಾರದಿಂದ ಮೂಲ ಬಂಡವಾಳವಾಗಿ ಪಡೆದ ₹5 ಕೋಟಿಗೆ ವಾರ್ಷಿಕವಾಗಿ ಬರುವ ಲಾಭಾಂಶದಲ್ಲಿ ಶೇ 95 ರಷ್ಟನ್ನು ಪಾಲಿಸಿದಾರರಿಗೆ ನೀಡಿ, ಶೇಕಡ 5 ಭಾಗವನ್ನು ಸರ್ಕಾರಕ್ಕೆ ನೀಡುತ್ತಿದೆ. ಸರ್ಕಾರದ ಪಾಲಿಗೆ ಎಲ್ಐಸಿ ಚಿನ್ನದ ಮೊಟ್ಟೆಯಿಡುತ್ತಿರುವ ಕೋಳಿಯಾಗಿದೆ. ಹೀಗಿದ್ದರೂ ಸರ್ಕಾರವು ಎಲ್ಐಸಿ ಷೇರುಗಳನ್ನು ಖಾಸಗಿಯಾಗಿ ಮಾರಾಟ ಮಾಡಲು ಚಿಂತನೆ ನಡೆಸುತ್ತಿರುವುದು ದುರುದಷ್ಟಕರ’ ಎಂದರು.
ಈ ನಿರ್ಧಾರ ದೇಶದ ಆರ್ಥಿಕತೆಯನ್ನು ಇನ್ನಷ್ಟು ಅಧೋಗತಿಗೆ ಕೊಂಡೊಯ್ಯಲಿದೆ ಎಂದು ಆರೋಪಿಸಿದರು.
ದೇಶದ ವಿಮಾ ಪಾಲಿಸಿದಾರರು, ನೌಕರರು, ಅಧಿಕಾರಿಗಳು, ಏಜೆಂಟರು ಮತ್ತು ದೇಶದ ಪ್ರಜೆಗಳು ಸರ್ಕಾರವು ಈ ನೀತಿಯಿಂದ ಹಿಂದೆ ಸರಿಯುವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಕನಕಪುರ ಎಲ್ಐಸಿ ಶಾಖೆಯ ಶಾಖಾಧಿಕಾರಿ ಹರಿಪ್ರಸಾದ್, ಅಭಿವೃದ್ಧಿ ಅಧಿಕಾರಿ ಮುನಿರಾಜು, ನೌಕರರ ಸಂಘದ ಅಧ್ಯಕ್ಷ ಮಹದೇವರಾವ್, ಕಾರ್ಯದರ್ಶಿ ಚಂದ್ರು, ವಿಮಾ ಪ್ರತಿನಿಧಿ ಮಾದನಾಯಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.