ADVERTISEMENT

ಕುಡಿದ ಮತ್ತಿನಲ್ಲಿ ಗಲಾಟೆ: ಪೊಲೀಸರ ಅತಿಥಿಯಾದ ಯುವಕ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 11:06 IST
Last Updated 6 ಡಿಸೆಂಬರ್ 2019, 11:06 IST

ರಾಮನಗರ: ಕುಡಿದ ಮತ್ತಿನಲ್ಲಿ ಮನಬಂದಂತೆ ವಾಹನ ಓಡಿಸಿದ್ದಲ್ಲದೇ, ತಡೆಯಲು ಬಂದ ಪೊಲೀಸರನ್ನೇ ನಿಂದಿಸಿದ ಯುವಕ ಈಗ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಗಿರೀಶ್ ಎಂಬ ಯುವಕ ಗುರುವಾರ ರಾತ್ರಿ ಈ ಕೃತ್ಯ ಎಸಗಿದ್ದಾನೆ. ಕಂಠಪೂರ್ತಿ ಮದ್ಯ ಸೇವಿಸಿದ ಆತ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ತನ್ನ ಟಾಟಾ ಏಸ್ ವಾಹನವನ್ನು ಮನಬಂದಂತೆ ಚಲಾಯಿಸಿದ್ದಾನೆ. ಅಲ್ಲದೇ ತನ್ನಲ್ಲಿದ್ದ ಬಿಯರ್ ಅನ್ನು ರಸ್ತೆಗೆ ಚೆಲ್ಲಿದ್ದಾನೆ. ಇದನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೂ ದರ್ಪ ತೋರಿದ್ದಾನೆ. ಎಸ್ಪಿ ಕಚೇರಿ ಮುಂಭಾಗ ಇದ್ದ ಸಂಚಾರ ಠಾಣೆ ಪೊಲೀಸರು ಇದನ್ನು ಪ್ರಶ್ನಿಸಿದ್ದಾರೆ.

ಈ ಸಂದರ್ಭ ಆರೋಪಿ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಸಹ ನಡೆಸಿದ್ದಾನೆ. ಈತನ ರಂಪಾಟ ಕಂಡು ದಂಗಾದ ಪೊಲೀಸರು ಆತನನ್ನು ಸಂಚಾರ ಠಾಣೆಗೆ ಕರೆತಂದಿದ್ದಾರೆ. ಕುಡಿದ ಮತ್ತಿನಲ್ಲೇ ಇದ್ದ ಆರೋಪಿ ಠಾಣೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾನೆ. ಹೇಗೋ ಹರಸಾಹಸ ಪಟ್ಟು ಆತನನ್ನು ಆಂಬುಲೆನ್ಸ್ ಹತ್ತಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆಂದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಆತನನ್ನು ಟೌನ್ ಪೊಲೀಸರ ವಶಕ್ಕೆ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.