ರಾಮನಗರ: ಸೆಪ್ಟೆಂಬರ್ 19ರಿಂದ ರಾಜ್ಯದಲ್ಲಿ ಪ್ರಥಮ ಭಾರಿಗೆ ನ್ಯಾಯಾಲಯಗಳಲ್ಲಿ ಇ-ಅದಾಲತ್ ನಡೆಯಲಿದೆ. ಕಕ್ಷಿದಾರರು ನ್ಯಾಯಾಲಯಕ್ಕೆ ಬಾರದೆಯೇ ತಾವಿದ್ದಲ್ಲಿಂದಲೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಈ ಕುರಿತು ರಾಜ್ಯದ ಎಲ್ಲ ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ನ್ಯಾಯಾಧೀಶರಿಗೆ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಶುಕ್ರವಾರ ಸಂಜೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿದರು.
ರಾಜ್ಯದ ಪ್ರತಿ ನ್ಯಾಯಾಲಯಗಳಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ವೆಬ್ ಲಿಂಕ್ ಕೂಡ ನೀಡಲಾಗುತ್ತಿದೆ. ಈ ಲಿಂಕ್ ಉಪಯೋಗಿಸಿಕೊಂಡು ಮೊಬೈಲ್ನಲ್ಲಿಯೂ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ನ್ಯಾಯಾಲಯಗಳಿಗೆ ತೆರಳುವ ಅವಶ್ಯಕತೆ ಇಲ್ಲ. ಮನೆ, ತಮ್ಮ ಕಚೇರಿ ಅಥವಾ ತಮ್ಮ ವಕೀಲರ ಮುಂದೇ ವೆಬ್ ಲಿಂಕ್ ಬಳಸಿಕೊಂಡು ಉಪಯೋಗಿಸಬಹುದಾಗಿರುತ್ತದೆ ಎಂದು ಹೇಳಿದರು.
ಇ- ಅದಾಲತ್ ನಡೆಸುವ ಸಂಬಂಧ ಈಗಾಗಲೇ ಹಲವು ಸಭೆ ನೆಡಸಲಾಗಿದೆ. ಅದರಲ್ಲೂ ಇನ್ಶೂರೆನ್ಸ್ ಕಂಪನಿಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಲಾಗಿದೆ. 8-10 ವರ್ಷಗಳ ಹಳೆಯ ವಾಹನ ವ್ಯಾಜ್ಯಗಳ ಇತ್ಯರ್ಥಕ್ಕೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಕೋವಿಡ್ ಇರುವ ಕಾರಣಕ್ಕೆ ನ್ಯಾಯಾಲಯಗಳ ಆವರಣದಲ್ಲಿ ಹೆಚ್ಚು ಮಂದಿ ಸೇರಲು ಅವಕಾಶವಿಲ್ಲ. ಹಾಗಾಗಿ ಕೆಲವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ನ್ಯಾ. ರಮಾ ಮಾತನಾಡಿ, ಇ ಅದಾಲತ್ ಮೂಲಕ ಸಣ್ಣಪುಟ್ಟ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ. ಇದಕ್ಕಾಗಿಯೇ ನ್ಯಾಯಾಲಯಗಳಿಗೆ ಬರುವ ಅಗತ್ಯ ಇರುವುದಿಲ್ಲ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ನ್ಯಾಯಧೀಶ ಬಿ.ವೆಂಕಟಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.