ಕನಕಪುರ: ‘ಕೊರೊನಾ ಸೋಂಕು ಜೀವನಕ್ಕಿಂತ ಜೀವ ಮುಖ್ಯ ಎಂಬುದನ್ನು ಮನುಷ್ಯನಿಗೆ ಅರ್ಥಮಾಡಿಸಿದೆ. ಕೆಟ್ಟ ಪರಿಸ್ಥಿತಿಯಲ್ಲೂ ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಬದಿಗೊತ್ತಿ ಕೆಲಸ ಮಾಡುತ್ತಿರುವ ಕೊರೊನಾ ಸೇನಾನಿಗಳಿಗೆ ದೊಡ್ಡ ನಮಸ್ಕಾರ’ ಎಂದು ಸ್ಟೌವ್ಕ್ರಾಫ್ಟ್ ಮಾಲೀಕ ರಾಜೇಂದ್ರ ಜೆ.ಗಾಂಧಿ ತಿಳಿಸಿದರು.
ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೈಗಾರಿಕಾ ಪ್ರದೇಶದಲ್ಲಿನ ಕುಕ್ಕರ್ ಫ್ಯಾಕ್ಟರಿಯಲ್ಲಿ ಕೋವಿಡ್ ಸೋಂಕು ತಡೆಗಾಗಿ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಸೇರಿದಂತೆ 34 ಮಂದಿಗೆ ತಲಾ ₹2,500 ಚೆಕ್ ವಿತರಣೆ ಮಾಡಿ ಮಾತನಾಡಿದರು.
‘ನಮಗೆ ತಿಳಿದಂತೆ ಇಂತಹ ಕೆಟ್ಟ ಕಾಯಿಲೆಯನ್ನು ನಾವು ಎಂದೂ ನೋಡಿಲ್ಲ. ಇತಿಹಾಸದ ಪುಟಗಳಲ್ಲಿ ಹಿಂದಿನ ಚರಿತ್ರೆಗಳು, ಭೀಕರ ಸನ್ನಿವೇಶಗಳು ದಾಖಲಾಗಿರುವಂತೆ ಕೊರೊನಾ ಕಾಯಿಲೆಯ ಪ್ರತಿ ಸಂದರ್ಭ, ಇದರಲ್ಲಿ ಹೋರಾಟ ನಡೆಸಿದ ಕೊರೊನಾ ಸೇನಾನಿಗಳ ವಿಚಾರ ಚರಿತ್ರೆಯ ಪುಟದಲ್ಲಿ ದಾಖಲಾಗಲಿದೆ. ನೀವು ಮಾಡುತ್ತಿರುವ ಈ ಸೇವೆ ಕಡಿಮೆ ಎಂದು ಭಾವಿಸಬೇಡಿ ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್.ರಾಮು ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಹೋರಾಟ ಮಾಡುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯ ಮಾಡಬೇಕೆಂದು ಗಾಂಧಿ ಅವರನ್ನು ಕೇಳಿದಾಗ ಅದಕ್ಕೆ ಒಪ್ಪಿ ಇಂದು ಹಣಕಾಸಿನ ನೆರವು ನೀಡುತ್ತಿದ್ದಾರೆ. ಹಿಂದೆಯು ಕೋವಿಡ್ ಕಿಟ್, ರೇಷನ್ ಕಿಟ್ ನೀಡಿ ಸಹಾಯ ಮಾಡಿದ್ದರು’ ಎಂದು ತಿಳಿಸಿದರು.
ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್.ಲಕ್ಷ್ಮಣ್ ಮಾತನಾಡಿ, ‘ಕೊರೊನಾ ಸೋಂಕು ನಿರ್ವಹಣೆಯನ್ನು ಪಂಚಾಯಿತಿಯಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ’ ಎಂದು ಹೇಳಿದರು.
ದೊಂಬರದೊಡ್ಡಿ ಪಿಎಚ್ಸಿ ವೈದ್ಯಾಧಿಕಾರಿ ಡಾ.ಶೈಲೇಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೊಡ್ಡಲಿಂಗೇಗೌಡ, ಕಾರ್ಯದರ್ಶಿ ಸುರೇಶ್ಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.