ಚನ್ನಪಟ್ಟಣ: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿದ್ದಾಗ ನೊಂದು ಅವುಗಳನ್ನು ರಸ್ತೆಗೆ ಸುರಿದು ಹಾಳು ಮಾಡುವ ಬದಲು ತಾಲ್ಲೂಕಿನ ಪ್ರಸಿದ್ಧ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಅನ್ನ ದಾಸೋಹಕ್ಕೆ ನೀಡಿ, ಸಹಾಯಧನ ಪಡೆಯುವಂತೆ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಮನವಿ ಮಾಡಿದ್ದಾರೆ.
ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಕ್ತರಿಗೆ ಪ್ರತಿದಿನ ಕ್ಷೇತ್ರದ ವತಿಯಿಂದ ಅನ್ನದಾಸೋಹ ನಡೆಯುತ್ತಿದೆ. ಅನೇಕ ಬಾರಿ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲವೆಂಬ ಕಾರಣಕ್ಕೆ ತಾವು ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯುತ್ತಾರೆ. ಕಟಾವಿನ ಕನಿಷ್ಠ ಖರ್ಚು ಸಹ ಬಾರದು ಎಂದು. ಇಂತಹ ಸಂದರ್ಭದಲ್ಲಿ ನೆರವಿಗೆ ನಿಲ್ಲಬೇಕೆಂಬ ಕಾರಣಕ್ಕೆ ರೈತರ ಬೆಳೆಗಳನ್ನು ಸಹಾಯಧನದ ರೂಪದಲ್ಲಿ ಖರೀದಿಸಲು ಕ್ಷೇತ್ರವು ಮುಂದಾಗಿದೆ ಎಂದು ತಿಳಿಸಿದರು.
ರಜಾದಿನಗಳು ಸೇರಿದಂತೆ ವಿಶೇಷವಾದ ದಿನಗಳಲ್ಲಿ ಸಹಸ್ರಾರು ಭಕ್ತರಿಗೆ ದಾಸೋಹ ಮಾಡಲಾಗುತ್ತದೆ. ಪ್ರತಿನಿತ್ಯ ದಾಸೋಹಕ್ಕೆ ಸಾಕಷ್ಟು ದಿನಸಿ ಹಾಗೂ ತರಕಾರಿ ಬಳಕೆಯಾಗುತ್ತದೆ. ಈ ಹಿನ್ನೆಲೆ ರೈತರಿಂದ ಬೆಳೆಗಳನ್ನು ಸಹಾಯಧನದ ರೂಪದಲ್ಲಿ ಪಡೆದುಕೊಳ್ಳಲಾಗುವುದು ಎಂದರು.
ಚನ್ನಪಟ್ಟಣ, ರಾಮನಗರ, ಮಾಗಡಿ, ಕುಣಿಗಲ್, ಮದ್ದೂರು ಸೇರಿದಂತೆ ಅಕ್ಕಪಕ್ಕದ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದಾಗ ಅದನ್ನು ಕ್ಷೇತ್ರಕ್ಕೆ ತಲುಪಿಸಿದರೆ ಬೆಳೆಗೆ ತಕ್ಕಂತೆ ಸೂಕ್ತ ಸಹಾಯಧನ ನೀಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.