ರಾಮನಗರ: ಇಲ್ಲಿನ ಕೈಲಾಂಚ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಸಿರು ಕರ್ನಾಟಕ ಆಂದೋಲನದ ಅಂಗವಾಗಿ ಗ್ರಾಮದ ‘ಒಂದು ಕುಟುಂಬಕ್ಕೆ ಒಂದು ಗಿಡ’ ಕೊಡುವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಜನರು ಇಂದು ತಮ್ಮ ಸುತ್ತಲಿನ ಪರಿಸರದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದ ಉತ್ತಮ ಪರಿಸರ ನಾಶವಾಗಿ, ಪ್ರಕೃತಿ ವಿಕೋಪದಂತಹ ದುರಂತಗಳು ಸಂಭವಿಸುತ್ತಿವೆ ಎಂದು ಕೈಲಾಂಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಪಾಂಡುರಂಗ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು ಮಾತನಾಡಿ, ಸಸಿಗಳನ್ನು ಬೆಳೆಸುವುದರಿಂದ ನಾಡು ಹಸಿರಾಗುತ್ತದೆ. ಜತೆಗೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಮನುಷ್ಯನ ಸ್ವಾರ್ಥದಿಂದಾಗಿ ಪರಿಸರ ನಾಶವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಭೂಮಿ ಬರಡಾಗುತ್ತದೆ ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಟಿ. ಮಂಜುನಾಥ್ ಮಾತನಾಡಿ, ನಾಡು ಹಸಿರಾಗಿರಲಿ ಎಂಬ ಉದ್ದೇಶದೊಂದಿಗೆ ಇದೇ 15 ರಿಂದ 18 ರವರೆಗೆ ಆಂದೋಲನ ನಡೆಸಿ ಜನರು ಸಸಿ ಬೆಳೆಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿ.ಪಿ. ಗಿರೀಶ್ ವಾಸು, ಸದಸ್ಯರಾದ ದೇವರದೊಡ್ಡಿ ಗೋಪಾಲನಾಯ್ಕ, ಬೋರಯ್ಯ, ಪಿಡಿಒ ಸತೀಶ್, ಎಸ್ಡಿಎಂಸಿ ಅಧ್ಯಕ್ಷ ಸುರೇಶ್, ಮುಖಂಡರಾದ ಕೆ. ಶಿವಲಿಂಗಯ್ಯ, ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಅರಣ್ಯ ರಕ್ಷಕ ಡಿ. ಯೋಗೇಶ್, ಅರಣ್ಯ ಪ್ರೇರಕ ಎಸ್.ಆರ್. ರುದ್ರಪ್ರಸಾದ್, ಎಲ್. ಸಜ್ಜನ್ರಾವ್ ಬಾಗ್ಲೆ, ಲಕ್ಷ್ಮೀದೇವಮ್ಮ, ರೇಣುಕಾಂಬ, ಪುಷ್ಪಾವತಿ, ಶಿವರಾಜು, ಪಿ.ಎಸ್. ರಮ್ಯ, ಸುಮ, ಎಚ್.ಕೆ.ಶೈಲಾ ಶ್ರೀನಿವಾಸ್, ಎಸ್. ರೇಖಾ, ಶಿವಲಿಂಗಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.