ADVERTISEMENT

ವೀರಾಪುರ, ಬಾನಂದೂರು ಅಭಿವೃದ್ಧಿಗೆ ಕ್ರಮ

ರಾಮನಗರ ಜಿಲ್ಲಾ ಆಹಾರ ಮೇಳಕ್ಕೆ ಸಚಿವ ಸಿ.ಟಿ.ರವಿ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:17 IST
Last Updated 8 ಅಕ್ಟೋಬರ್ 2019, 13:17 IST
ಯಂಗಯ್ಯನ ಕೆರೆ ಆವರಣದಲ್ಲಿ ನಡೆಯುತ್ತಿರುವ ಆಹಾರ ಮೇಳಕ್ಕೆ ಸಚಿವ ಸಿ.ಟಿ. ರವಿ ಸೋಮವಾರ ಭೇಟಿ ನೀಡಿದ್ದರು
ಯಂಗಯ್ಯನ ಕೆರೆ ಆವರಣದಲ್ಲಿ ನಡೆಯುತ್ತಿರುವ ಆಹಾರ ಮೇಳಕ್ಕೆ ಸಚಿವ ಸಿ.ಟಿ. ರವಿ ಸೋಮವಾರ ಭೇಟಿ ನೀಡಿದ್ದರು   

ರಾಮನಗರ: ಸ್ಥಳೀಯ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಆಹಾರ ಮೇಳಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದುಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಇಲ್ಲಿನ ಯಂಗಯ್ಯನ ಕೆರೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ರಾಮನಗರ ಜಿಲ್ಲಾ ಆಹಾರ ಮೇಳಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

ನಾಡ ಹಬ್ಬ ದಸರಾ ಹಬ್ಬವನ್ನು ಎಲ್ಲರೂ ಸೇರಿ ಆಚರಣೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಗ್ರಾಮಗಳನ್ನು ಬೆಸೆಯುವ ಸಂಸ್ಕೃತಿ ವಿನಿಮಯದ ಹಬ್ಬವನ್ನಾಗಿ ಪರಿವರ್ತಿಸುವ ಯೋಜನೆಯೊಂದಿಗೆ ದಸರಾ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ಥಳೀಯ ಆಹಾರ ಪದಾರ್ಥ ಪರಿಚಯಿಸಲು ವೇದಿಕೆ ಕಲ್ಪಿಸಿಕೊಡುವ ಹೊಸ ಪ್ರಯತ್ನ ಇದಾಗಿದೆ ಎಂದರು.

ADVERTISEMENT

ಮಂಡ್ಯ ಜಿಲ್ಲೆ ಶ್ರೀನಿವಾಸ್ ಅಗ್ರಹಾರದಲ್ಲಿ ಹಳ್ಳಿ ಮತ್ತು ಕೃಷಿ ಸಂಸ್ಕೃತಿಯ ಪರಿಚಯಕ್ಕೂ ವೇದಿಕೆ ಕಲ್ಪಿಸಲಾಗಿದೆ. ಜನರಿಂದ ಬರುವ ಅಭಿಪ್ರಾಯಗಳನ್ನು ಸಹ ಕೇಂದ್ರೀಕರಿಸಿ ಇನ್ನೂ ಹೆಚ್ಚಿನ ಆಕರ್ಷಣೆಯಾಗಿ ಮುಂದಿನ ವರ್ಷ ಆಚರಣೆ ಮಾಡಲಾಗುವುದು ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಒಳ್ಳೆಯ ಅವಕಾಶಗಳಿವೆ. ಆಗಾಗಿ ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಡ್ಯಾಂ ಬಳಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕಣ್ಣ ಜಲಾಶಯದ ಅಭಿವೃದ್ಧಿ ಬಗ್ಗೆ ಚಿಂತನೆ ಇದೆ. ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮ ಸ್ಥಳ ವೀರಾಪುರ ಹಾಗೂ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ಅಭಿವೃದ್ಧಿ ಪಡಿಸಲು ₹25 ಕೋಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ’ ಎಂದರು.

‘ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಪೂಜ್ಯರ ಗ್ರಾಮಗಳ ಅಭಿವೃದ್ಧಿ ಎಂದರೆ ರಸ್ತೆ ಚರಂಡಿ ಚರಂಡಿ ನಿರ್ಮಾಣ ಮಾಡುವುದಷ್ಟೇ ಅಲ್ಲ, ಆ ಗ್ರಾಮಗಳು ಮಾದರಿಯಾಗಿ ನಿಲ್ಲುವಂತಹ ವಾತಾವರಣ ನಿರ್ಮಾಣ ಮಾಡುವ ಚಿಂತನೆ ನಮ್ಮ ಮುಂದಿದೆ’ ಎಂದು ತಿಳಿಸಿದರು.
ತಹಶೀಲ್ದಾರ್ ನರಸಿಂಹಮೂರ್ತಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಸ್. ಶಂಕರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.