ADVERTISEMENT

‘ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ’

ಗೌಸಿಯ ಕಾಲೇಜು: ಪದವಿ ಪ್ರದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 12:33 IST
Last Updated 8 ಜೂನ್ 2019, 12:33 IST
ಗೌಸಿಯಾ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಬಲವೀರ ರೆಡ್ಡಿ ವಿದ್ಯಾರ್ಥಿನಿಯೊಬ್ಬರಿಗೆ ಪದವಿ ಪ್ರಮಾಣಪತ್ರ ವಿತರಿಸಿದರು
ಗೌಸಿಯಾ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಬಲವೀರ ರೆಡ್ಡಿ ವಿದ್ಯಾರ್ಥಿನಿಯೊಬ್ಬರಿಗೆ ಪದವಿ ಪ್ರಮಾಣಪತ್ರ ವಿತರಿಸಿದರು   

ರಾಮನಗರ: ದೇಶವು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಾದಲ್ಲಿ ಉದ್ಯಮ ಮತ್ತು ಉದ್ಯೋಗಗಳನ್ನು ಸೃಜಿಸುವ ಅಗತ್ಯವಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಬಲವೀರ ರೆಡ್ಡಿ ಪ್ರತಿಪಾದಿಸಿದರು.

ನಗರದ ಗೌಸಿಯಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಗಳು ಹಾಗೂ ವಿದ್ಯಾ ಸಂಸ್ಥೆಗಳು ಜೊತೆಗೂಡಿ ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ ಹೆಚ್ಚಿಸಬೇಕು. ಪದವಿ ಪೂರೈಸಿದವರು ಉದ್ಯೋಗ ಗಳಿಕೆಗೆ ಸೀಮಿತವಾಗದೇ, ಕೌಶಲಗಳನ್ನು ರೂಢಿಸಿಕೊಂಡು ಉದ್ಯಮಗಳನ್ನು ಸ್ಥಾಪಿಸಬೇಕು, ಉದ್ಯೋಗಗಳನ್ನು ಸೃಜಿಸುವಂತವರಾಗಬೇಕು ಎಂದು ಕಿವಿಮಾತು ಹೇಳಿದರು.

ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ ‘21ನೇ ಶತಮಾನ ಭಾರತದ್ದು, ವಿಶ್ವದ ಚಿತ್ರಣವನ್ನೇ ಬದಲಾಯಿಸಿ ಮುನ್ನೆಡೆಸುವ ಸಾಮರ್ಥ್ಯ ಭಾರತಕ್ಕೆ ಇದೆ’ ಎಂದಿದ್ದರು. ಇದು ಸಾಕಾರವಾಗಬೇಕಾದರೆ ನಾಡಿನ ಯುವ ಸಮುದಾಯ ಮನಸ್ಸು ಮಾಡಬೇಕಾಗಿದೆ. ಇದು ಸ್ಪರ್ಧಾತ್ಮಕ ಯುಗ. ಪ್ರತಿ ಹಂತದಲ್ಲೂ ಸವಾಲುಗಳು ಎದುರಾಗುತ್ತವೆ. ಅದನ್ನು ಎದುರಿಸಿ, ವಿದ್ಯೆಗೆ ತಕ್ಕ ಕೌಶಲಗಳನ್ನು ರೂಢಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.

ADVERTISEMENT

ಗೌಸಿಯಾ ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿ ತನ್ವೀರ್ ಹಕ್ ಮಾತನಾಡಿ, ಇಂದಿಗೂ ಭಾರತ ಶೇ 40ರಷ್ಟು ವಸ್ತುಗಳು ಮುಂದಾವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದಲ್ಲೇ ಎಲ್ಲವನ್ನು ಉತ್ಪಾದಿಸಿ ರಫ್ತು ಮಾಡುವಂತಹ ತಂತ್ರಜ್ಞಾನಗಳಿಗೆ ಕಾರಣರಾಗಬೇಕು ಎಂದರು.

‘ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳು, ಒಳ್ಳೆಯ ನಡತೆ ಯಶಸ್ಸಿನ ಮೆಟ್ಟಿಲು, ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಿ, ಸೋಲಿಗೆ ಅಂಜಬೇಡಿ, ನಿಮಗಿಂತ ಮಿಗಿಲಾದವರಿಲ್ಲ ಎಂದು ಭಾವಿಸಬೇಡಿ’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಎ.ಆರ್. ಅನ್ವರ್ ಖಾನ್, ಜಿಐಇಟಿ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.

ಪಿಎಚ್‌.ಡಿ ಪಡೆದವರಿಗೆ ಸನ್ಮಾನ
ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ಪಿ.ಎಚ್.ಡಿ ಪಡೆದ ಡಾ.ಅಪ್ಸರ್ ಪಾಷ (ಭೌತವಿಜ್ಞಾನ), ಡಾ.ಪ್ರಭುನಂದಂನ್ (ಮೆಕಾನಿಕಲ್), ಡಾ.ಮೊಹಮದ್ ಅಖಿಲ್ ಅಹಮದ್ (ಮೆಕಾನಿಕಲ್), ಡಾ.ಸೈಫುಲ್ಲಾ ಖಾನ್ (ರಸಾಯನ ವಿಜ್ಞಾನ), ಡಾ.ಇ.ರಮೇಶ್ (ಸಿವಿಲ್), ಡಾ.ಸಮೀನಾ ಬಾನು (ಕಂಪ್ಯೂಟರ್ ಸೈನ್ಸ್) ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಪದವಿ ವ್ಯಾಸಂಗ ಪೂರೈಸಿದ ಸಿವಿಲ್ ವಿಭಾಗದ 126 ವಿದ್ಯಾರ್ಥಿಗಳು, ಮೆಕಾನಿಲ್ ವಿಭಾಗದ 87, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ 27, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಫರ್ಮೇಷನ್ ವಿಭಾಗದ 85, ಇನಫರ್ಮೇಷನ್ ಟೆಕ್ನಾಲಜಿ ವಿಭಾಗದ 15, ಕಂಪ್ಯೂಟರ್ ಸೈನ್ಸ್ ವಿಭಾಗದ 58 ವಿದ್ಯಾರ್ಥಿಗಳು ಸೇರಿ ಒಟ್ಟು 398 ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಪ್ರತಿ ವಿಭಾಗದಲ್ಲೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಜಿ ನಬೀ ಷರೀಪ್ ಮೆಮೋರಿಯಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ.ಟೆಕ್ ಪದವಿ ಪೂರೈಸಿದ 21 ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.