ರಾಮನಗರ: ಜಮೀನಿನ ಇ–ಖಾತೆ ಮಾಡಿಕೊಡಲು ₹ 2 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಹಾಗೂ ಅವರ ಪತಿ ಶಿವರಾಜಕುಮಾರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ತಾವರೆಕೆರೆ ಗ್ರಾಮದ ನಿವಾಸಿಯೊಬ್ಬರು ಗಂಗೇನಹಳ್ಳಿ ಗ್ರಾಮದಲ್ಲಿರುವ 2 ಎಕರೆ 2 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಂಡಿದ್ದರು. ಇದಕ್ಕೆ ಇ–ಖಾತೆ ಮಾಡಿಕೊಡುವಂತೆ ಚೋಳನಾಯಕನಹಳ್ಳಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸಕ್ಕೆ ಪಂಚಾಯಿತಿಯ ಅಧ್ಯಕ್ಷೆ ಶ್ವೇತಾ ಮತ್ತು ಆಕೆಯ ಪತಿ ₹ 5 ಲಕ್ಷ ಲಂಚಕ್ಕೆ ಬೇಡಿಕೆಇಟ್ಟಿದ್ದರು.
ದೂರುದಾರರು ಎಸಿಬಿಗೆ ಮಾಹಿತಿ ನೀಡಿದ್ದು, ಅವರ ಸೂಚನೆ ಮೇರೆಗೆ ಶ್ವೇತಾ ಪತಿ ಶಿವರಾಜಕುಮಾರ್ ಅವರಿಗೆ ₹ 2 ಲಕ್ಷ ಲಂಚ ನೀಡುತ್ತಿದ್ದ ವೇಳೆ ರಾಮನಗರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳು ಹಾಗೂ ಹಣವನ್ನು ವಶಕ್ಕೆ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.