ರಾಮನಗರ: ‘ನಾನು ಹೇಗಿರಬೇಕು ಎಂದು ಈಶ್ವರಪ್ಪ ಹತ್ತಿರ ಸಲಹೆ ತೆಗೆದುಕೊಳ್ಳುವ ಅಗತ್ಯ ಇಲ್ಲ. ಮೊದಲು ಅವರ ನಾಲಿಗೆಗೆ ಕಡಿವಾಣ ಹಾಕಿಕೊಳ್ಳಲಿ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬಿಡದಿಯಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, 'ನಿನ್ನೆಯ ಟ್ವೀಟ್ ನಲ್ಲಿ ನಿಮ್ಮ ಹೇಳಿಕೆಗಳನ್ನು ನೆನಪಿಸಿಕೊಂಡಿದ್ದೇನೆ ಅಷ್ಟೇ. ಸೈನಿಕರು, ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡಿಲ್ಲ. ಶ್ರೀಮಂತರು ಯಾರೂ ತಮ್ಮ ಮಕ್ಕಳನ್ನು ದೇಶ ಕಾಯೋದಕ್ಕೆ ಕಳುಹಿಸುವುದಿಲ್ಲ. ಈಶ್ವರಪ್ಪ, ಯಡಿಯೂರಪ್ಪನ ಮಕ್ಕಳು ದೇಶ ಕಾಯೋದಕ್ಕೆ ಹೋಗುವುದಿಲ್ಲ. ಉದ್ಯೋಗವಿಲ್ಲದೇ ಕುಟುಂಬದ ನಿರ್ವಹಣೆಗಾಗಿ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿ ನಾನೇನು ಅಪರಾಧ ಮಾಡಿಲ್ಲ. ಸೈನಿಕರನ್ನು ಕೇಳಿದರೆ ನೀವು ಹೇಳಿರೋದು ಸತ್ಯ ಎನ್ನುತ್ತಾರೆ. ನಾನು ವಾಸ್ತವಾಂಶ ಮಾತನಾಡುವವನು. ಈಶ್ವರಪ್ಪ ಥರ ತೆವಲಿಗೆ ಮಾತನಾಡುವವನಲ್ಲ’ ಎಂದು ಕಿಡಿಕಾರಿದರು.
ಎಸ್ಡಿಪಿಐ ಸಂಘಟನೆ ನಿಷೇಧ ಕುರಿತು ಪ್ರತಿಕ್ರಿಯಿಸಿ, ‘ಕಲ್ಲು ಹೊಡೆದ ವಿಷಯ ಈಗ ಹೇಳುತ್ತಾರೆ. ಆಗ ಏಕೆ ಹೇಳಲಿಲ್ಲ. ಅಧಿಕಾರಿಗಳು ವಿಷಯವನ್ನು ಡೈವರ್ಟ್ ಮಾಡಲು ಮುಂದಾಗಿದ್ದಾರೆ. ಅಲ್ಲದೇ, ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಅವರನ್ನು ಹತ್ಯೆ ಮಾಡಲಿಕ್ಕೆ ಹೊರಟಿದ್ರು ಅಂತ ಸುದ್ದಿ ಹರಿಬಿಟ್ಟಿದ್ದೀರಿ. ಏನ್ ಚಾಕು ಹಾಕಿ ಹತ್ಯೆ ಮಾಡೋಕೆ ಹೋಗುತ್ತಾರಾ’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.