ADVERTISEMENT

ರಾಮನಗರ: ಸಂಭ್ರಮದ ಹನುಮನ ಜಯಂತಿ ಆಚರಣೆ

ದೇವಾಲಯಗಳಲ್ಲಿ ವಾಯುಪುತ್ರನಿಗೆ ವಿಶೇಷ ಪೂಜೆ; ಭಕ್ತರಿಗೆ ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 16:06 IST
Last Updated 13 ಡಿಸೆಂಬರ್ 2024, 16:06 IST
ಹನುಮ ಜಯಂತಿ ಅಂಗವಾಗಿ ರಾಮನಗರದ ವಿಜಯನಗರದಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆಂಜನೇಯ ಮೂರ್ತಿಯ ಗೋಪುರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು
ಹನುಮ ಜಯಂತಿ ಅಂಗವಾಗಿ ರಾಮನಗರದ ವಿಜಯನಗರದಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆಂಜನೇಯ ಮೂರ್ತಿಯ ಗೋಪುರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು   

ರಾಮನಗರ: ಅಂಜನಿಪುತ್ರ ಹನುಮ ಜಯಂತಿಯನ್ನು ನಗರದಲ್ಲಿ ಶುಕ್ರವಾರ ಶ್ರದ್ಧಾ–ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ದೇವಾಲಯಗಳಲ್ಲಿ ಜಮಾಯಿಸಿದ್ದ ಹನುಮ ಭಕ್ತರು ಜಾತ್ರೆಯ ವಾತಾವರಣವನ್ನು ಸೃಷ್ಟಿಸಿದ್ದರು.

ದೇವಾಲಯಗಳಲ್ಲಿ ಬೆಳಿಗ್ಗೆ ಆಂಜನೇಯ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಗಣಹೋಮ, ರಾಮತಾರಕ ಹೋಮ, ಪ್ರಧಾನ ಹೋಮ ಹಾಗೂ ವಿವಿಧ ಹೋಮ ಮತ್ತು ಪೂರ್ಣಾಹುತಿ ಆಚರಣೆಗಳನ್ನು ನೆರವೇರಿಸಲಾಯಿತು. ಭಕ್ತಗಣ ಭಜನೆಗಳನ್ನು ಮಾಡಿ, ವಾಯುಪುತ್ರನನ್ನು ಸ್ಮರಿಸಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ವಿಜಯನಗರದ ಅಭಯ ಆಂಜನೇಯ ಸ್ವಾಮಿ, ಗಾಂಧಿನಗರದ ಕೋತಿ ಆಂಜನೇಯ ಸ್ವಾಮಿ, ಅಗ್ರಹಾರದ ಆಂಜನೇಯ ಸ್ವಾಮಿ, ಹೊರವಲಯದ ರಾಮದೇವರ ಬೆಟ್ಟ, ಕೆಂಗಲ್ ಆಂಜನೇಯ ಸ್ವಾಮಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಆಂಜನೇಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ADVERTISEMENT

ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಹುತೇಕ ದೇವಾಲಯಗಳಲ್ಲಿ ದೇವಾಲಯದ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಕೆಲ ಭಕ್ತರು ಸಹ ಸ್ವಯಂಪ್ರೇರಿತವಾಗಿ ಪುಳಿಯೋಗರೆ, ಚಿತ್ರಾನ್ನ, ಮಜ್ಜಿಗೆ, ಪಾನಕ ವಿತರಣೆ ಮಾಡಿ ಭಕ್ತಿ ಮೆರೆದರು.

ಹಿಂದೂ ಜಾಗರಣ ವೇದಿಕೆ ವತಿಯಿಂದ ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಬೈಕ್ ರ್‍ಯಾಲಿ ಜರುಗಿತು. ಹೊಸಳ್ಳಿ ಬಯಲು ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾದ ರ‍್ಯಾಲಿ ರಸ್ತೆಗಳಲ್ಲಿ ಸಂಚರಿಸಿತು. ಅಗ್ರಹಾರದ ಆಂಜನೇಯ ಸ್ವಾಮಿ ದೇವಾಲಯ, ವಿಜಯನಗರದ ಆರ್ಚ್ ಬಳಿಯ ಆಂಜನೇಯ ಸ್ವಾಮಿ ದೇವಾಲಯ, ಎಂ.ಎಚ್. ಶಾಲೆ ಬಳಿಯ ಆಂಜನೇಯಸ್ವಾಮಿ ದೇಗುಲ, ರಾಯರದೊಡ್ಡಿ ಮಾರ್ಗವಾಗಿ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದಲ್ಲಿಅಂತ್ಯಗೊಂಡಿತು.

ಹನುಮ ಜಯಂತಿ ಅಂಗವಾಗಿ ರಾಮನಗರದ ಗಾಂಧಿನಗರದ ಕೋತಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು
ಹನುಮ ಜಯಂತಿ ಅಂಗವಾಗಿ ರಾಮನಗರದ ವಿಜಯನಗರದಲ್ಲಿರುವ ಅಭಯ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಹನುಮ ಜಯಂತಿ ಅಂಗವಾಗಿ ರಾಮನಗರದ ಅಗ್ರಹಾರದಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು
ಹನುಮ ಜಯಂತಿ ಪ್ರಯುಕ್ತ ಹನುಮ ಭಕ್ತರು ಹನುಮ ಮಾಲೆ ಧರಿಸಿ ತಾಲ್ಲೂಕಿನ ಆಂಜನೇಯ ಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು
ಹನುಮ ಜಯಂತಿ ಪ್ರಯುಕ್ತ ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮದ ಜಲಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿರುವ ವೀರಾಂಜನೇಯ ಸ್ವಾಮಿ ದೇವರ ಮೂರ್ತಿಗೆ ವಿಶೇಷಾಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.