ಮಾಗಡಿ: ‘ಆಗಲೇ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರೆ ಈಗಾಗಲೇ ನಾನು ಎರಡು ಬಾರಿ ಸಚಿವನಾಗಿ ಅಧಿಕಾರ ಅನುಭವಿಸುತ್ತಿದ್ದೆ. 20 ವರ್ಷಗಳಿಂದ ಜೆಡಿಎಸ್ನಲ್ಲಿ ಉಳಿದುಕೊಂಡು ಬಿಟ್ಟೆ. ಹಾಗಾಗಿ ಇನ್ನೂ ಶಾಸಕನಾಗಿ ಉಳಿಯಬೇಕಾಯಿತು’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಬೇಸರ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಬಗ್ಗೆ ತೀರ್ಮಾನ ಮಾಡುತ್ತಾರೆ’ ಎಂದರು.
‘ನಾನು ಐದು ಬಾರಿ ಶಾಸಕನಾಗಿದ್ದೇನೆ. ರಾಜಕೀಯವಾಗಿ ನಾನು ಮಾಡಿದ ಒಂದೇ ತಪ್ಪು ಎಂದರೆ ಜೆಡಿಎಸ್ನಲ್ಲಿ 20 ವರ್ಷ ಜೀವನ ಹಾಳು ಮಾಡಿಕೊಂಡೆ’ ಎಂದರು.
‘ಆಗಲೇ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಸೇರಿದ ಡಾ.ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್ ಹಾಗೂ ಅನೇಕರು ಸಚಿವರಾಗಿದ್ದಾರೆ. ನಾನು ಸೇರಿದಂತೆ ಕೆಲವರು ಸಿದ್ದರಾಮಯ್ಯ ಜತೆ ಹೋಗದೆ ಎಚ್.ಡಿ. ಕುಮಾರಸ್ವಾಮಿ ಜತೆ ಉಳಿದುಕೊಂಡೆವು. ಹಾಗಾಗಿ ನಮ್ಮ ರಾಜಕೀಯ ಸ್ಥಿತಿ ಹೀಗಾಗಿದೆ’ ಎಂದು ವಿಷಾದಿಸಿದರು.
ಕಲ್ಯಾಗೇಟ್ ಮಂಜುನಾಥ್, ತೇಜು, ಶಾಂತರಾಜು, ರೂಪೇಶ್, ಕಸ್ತೂರಿ ಕಿರಣ್, ತಗ್ಗೀಕುಪ್ಪೆ ರಾಮು, ಮಂಜುನಾಥ್, ಚಿಲಿಪಿಲಿ ಗಂಗರಾಜು, ಅಶ್ವಥ್, ಸಂದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.