ADVERTISEMENT

ಎಚ್‌ಡಿಕೆ ಬಿಜೆಪಿಯವರ ಬಾಗಿಲು ಬಡಿಯುತ್ತಿರುವುದು ನಾಚಿಕೆಗೇಡು: ಎಚ್.ಸಿ. ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:51 IST
Last Updated 4 ಡಿಸೆಂಬರ್ 2020, 13:51 IST
ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ
ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ   

ರಾಮನಗರ: ‘ಎಚ್‌.ಡಿ. ಕುಮಾರಸ್ವಾಮಿ ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಬಿಜೆಪಿಯವರ ಮನೆ ಬಾಗಿಲು ಬಡಿಯುತ್ತಿರುವುದು ನಾಚಿಕೆಗೇಡಿನ ಕೆಲಸ. ಅವರು ರಾಮನಗರ ಜಿಲ್ಲೆಯ ಸ್ವಾಭಿಮಾನಿ ಮತದಾರರ
ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಆಗ್ರಹಿಸಿದರು.

ತಾಲ್ಲೂಕಿನ ಕೂಟಗಲ್‌ನಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಚುನಾವಣೆಯ ಕಾಂಗ್ರೆಸ್ ಪೂರ್ವಭಾವಿ ಸಭೆ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ಮಾಜಿ ಮುಖ್ಯಮಂತ್ರಿ ಆದವರು ಅಧಿಕಾರಿಗಳನ್ನು ತಮ್ಮ ಮನೆ ಬಾಗಿಲಿಗೆ ಕರೆಯಿಸಿಕೊಂಡು ಕೆಲಸ ಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲೂ ಅನೇಕ ಮಾಜಿ ಮುಖ್ಯಮಂತ್ರಿಗಳಿದ್ದು, ಅವರೆಂದೂ ಹೀಗೆ ನಡೆದುಕೊಂಡಿಲ್ಲ. ಆದರೆ ಕುಮಾರಸ್ವಾಮಿಯೇ ಪ್ರತಿಯೊಂದನ್ನುಬಿಜೆಪಿ ಸಚಿವರ ಮನೆ ಬಾಗಿಲಿಗೆ ಹೋಗಿ ಬರುತ್ತಿರುವುದು ಶೋಭೆಯಲ್ಲ’ ಎಂದರು.

‘ಕಾಂಗ್ರೆಸ್ ಸಹವಾಸ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 124 ಸ್ಥಾನ ಗೆಲ್ಲುವುದು ಆಗದ ಮಾತು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಆ ಪಕ್ಷದವರು ಇವರನ್ನೇನು ಮುಖ್ಯಮಂತ್ರಿ ಮಾಡುವುದಿಲ್ಲ’ ಎಂದು ಲೇವಡಿ ಮಾಡಿದರು.

ADVERTISEMENT

ಪಕ್ಷಾಂತರ ಭೀತಿ: ‘ಕುಮಾರಸ್ವಾಮಿ ಮತ್ತು ಅನಿತಾ ಈಹಿಂದೆ ಯಾವ ಸ್ಥಳೀಯ ಚುನಾವಣೆಗಳಲ್ಲೂ ಇಷ್ಟು ಓಡಾಡಿದ್ದನ್ನು ನಾನು ಕಂಡಿಲ್ಲ. ಆದರೆ ಈಗ ಅವರಿಗೆ ಪಕ್ಷಾಂತರದ ಭೀತಿ ಕಾಡುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್
ಮುಖಂಡರು ಬೇರೊಂದು ಪಕ್ಷಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಪ್ರಚಾರಕ್ಕೆ ಬರುತ್ತಿದ್ದಾರೆ. ಜಿಲ್ಲೆಯ ಯಾವೊಬ್ಬ ಮುಖಂಡರಿಗೂ ಅವರು ಉಪಕಾರ ಮಾಡಿಲ್ಲ. ನಾನೆಂದು ಜೆಡಿಎಸ್‌ನಿಂದ ಅಧಿಕಾರ ಉಂಡು
ಹೋಗಿಲ್ಲ. ಮಂತ್ರಿಯೂ ಆಗಿಲ್ಲ. ಅಲ್ಲಿ ಇದ್ದರೆ ಉತ್ತಮ ಭವಿಷ್ಯ ಇಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಸೇರಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.