ರಾಮನಗರ: ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಅಗ್ನಿಪಥಯೋಜನೆಯು ಆರ್ಎಸ್ಎಸ್ ಕೂಸು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣದಲ್ಲಿ ಭಾನುವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಯಾರು ಸಲಹೆ ನೀಡಿದರೋ ಗೊತ್ತಿಲ್ಲ. ಸಂಸತ್ನಲ್ಲಿ ಎಂದೂ ಈ ಬಗ್ಗೆ ಚರ್ಚೆ ನಡೆದಿಲ್ಲ. ಹೊಸತಾಗಿ 10 ಲಕ್ಷ ಸೈನಿಕರನ್ನು ಆಯ್ಕೆ ಮಾಡಿ 4 ವರ್ಷದಲ್ಲಿ ಶೇ 75ರಷ್ಟು ಜನರನ್ನು ಸೇನೆಯಿಂದ ಹೊರಗೆ ಕಳುಹಿಸುತ್ತಾರೆ. ಹಾಗಾದರೆ ನಂತರದಲ್ಲಿ ಅವರ ಪಾಡೇನು? ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ನವರು ಕವಾಯತು ಮಾಡಿ ಕೆಲವರನ್ನು ಕಾರ್ಯಕರ್ತರೆಂದು ಇಟ್ಟುಕೊಂಡಿದ್ದಾರೆ. ಅವರೆಲ್ಲರನ್ನೂ ಈ ಮೂಲಕ ಸೇನೆಗೆ ಸೇರಿಸಲು ಸಂಚು ನಡೆದಿದೆ. ಹೊಸತಾಗಿ ಆಯ್ಕೆ ಮಾಡುವ 10 ಲಕ್ಷ ಸೈನಿಕರ ಪೈಕಿ 2.5 ಲಕ್ಷ ಮಂದಿಯನ್ನು ಸೇನೆಯಲ್ಲಿಯೇ ಉಳಿಸಿಕೊಂಡು ಆ ಮೂಲಕ ಇಡೀ ಸೇನೆಯನ್ನು ಆರ್ಎಸ್ಎಸ್ ಹಿಡಿತಕ್ಕೆ ತೆಗೆದುಕೊಳ್ಳುವುದು. ಉಳಿದ 7.5 ಲಕ್ಷ ಮಂದಿಯನ್ನು ದೇಶದೆಲ್ಲೆಡೆ ಕಳುಹಿಸಿ ಆ ಮೂಲಕ ಇಡೀ ದೇಶವನ್ನು ಆರ್ಎಸ್ಎಸ್ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ಇದ್ದಂತೆ ಇದೆ. ನಾಜಿ ಕಾಲದಲ್ಲೇ ಆರ್ಎಸ್ಎಸ್ ಸಹ ಆರಂಭ ಆಗಿದ್ದು, ಭಾರತದಲ್ಲೂ ನಾಜಿ ಆಡಳಿತ ತರಲು ಹೊರಟಂತೆ ಇದೆ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
ಪರಿಷತ್ ಚುನಾವಣೆಯಲ್ಲಿ ಕೆಲವು ಆಂತರಿಕ ವಿಚಾರಗಳಿಂದ ಜೆಡಿಎಸ್ ಸೋತಿದೆ. ಆದರೆ ಇದಕ್ಕೂ ವಿಧಾನಸಭೆ ಚುನಾವಣೆಗೂ ಸಂಬಂಧ ಇಲ್ಲ. ಆಗಸ್ಟ್ 15ರಿಂದ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಮಾಡುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.