ADVERTISEMENT

ಆರೋಗ್ಯ ಶಿಬಿರ, 1,500 ಮಂದಿಗೆ ತಪಾಸಣೆ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ಶಿಬಿರ ಆಯೋಜನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 13:29 IST
Last Updated 26 ಫೆಬ್ರುವರಿ 2020, 13:29 IST
ಹಾರೋಹಳ್ಳಿಯಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಎಂಎಲ್‌ಸಿ ರವಿಕುಮಾರ್‌ ಉದ್ಘಾಟಿಸಿದರು
ಹಾರೋಹಳ್ಳಿಯಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಎಂಎಲ್‌ಸಿ ರವಿಕುಮಾರ್‌ ಉದ್ಘಾಟಿಸಿದರು   

ಹಾರೋಹಳ್ಳಿ (ಕನಕಪುರ): ಇಲ್ಲಿನ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ದಯಾನಂದ ಸಾಗರ ಆಸ್ಪತ್ರೆಯ ತಜ್ಞವೈದ್ಯರು 10 ವಿಭಾಗವಾಗಿ ಆರೋಗ್ಯ ತಪಾಸಣೆಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ನಡೆಸಿದರು. ಶಿಬಿರದಲ್ಲಿ 1,500 ಶಿಬಿರಾರ್ಥಿಗಳು ಆರೋಗ್ಯ ತಪಾಸಣೆ ಮಾಡಿಸಿದರು.

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಯಡಿಯೂರಪ್ಪ ಅವರು ತಮ್ಮ ಸಂಘಟಿತ ಹೋರಾಟದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಮುಖ್ಯಮಂತ್ರಿ ಆಗಿದ್ದಾರೆ.ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ, ಛಲವಿದ್ದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಯಡಿಯೂರಪ್ಪ ಅವರೇ ಉದಾಹರಣೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್‌ ಮಾತನಾಡಿ, ‘ಯಡಿಯೂರಪ್ಪನವರು ಆಡಂಬರದ ಜೀವನ ನಡೆಸಿದವರಲ್ಲ. ಮಾಡುವ ಪ್ರತಿಯೊಂದು ಕೆಲಸವೂ ಸಾಮಾಜಿಕವಾಗಿ ಇರಬೇಕೆಂದು ಬಯಸಿದವರು.ಅವರ ಹುಟ್ಟುಹಬ್ಬವನ್ನು ಹಾರೋಹಳ್ಳಿ ಹೋಬಳಿ ಕೇಂದ್ರದಲ್ಲಿ ಆರೋಗ್ಯಉಚಿತ ತಪಾಸಣೆ ಶಿಬಿರದ ಮೂಲಕ ಆಚರಿಸುತ್ತಿದ್ದೇವೆ. ಇದರಿಂದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಜನತೆಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಈ ಭಾಗದಲ್ಲಿ ದಯಾನಂದ ಸಾಗರ ಮೆಡಿಕಲ್‌ ಕಾಲೇಜು, ವಿಶ್ವವಿದ್ಯಾಲಯ ಪ್ರಾರಂಭಗೊಂಡಿರುವುದರಿಂದ ಇಲ್ಲಿನ ಜನಕ್ಕೆ ಹೆಚ್ಚು ಉಪಯೋಗವಾಗುತ್ತಿದೆ. ಕಾಲೇಜಿನವರು ತಿಂಗಳಿಗೆ ಒಮ್ಮೆಯಾದರೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಿ ಬಡವರ ಸೇವೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕಾರ್ಯಕ್ರಮದ ಅಂಗವಾಗಿ 2 ಸಾವಿರ ಗಿಡಗಳನ್ನು ಬೆಳೆಸಲು ರೈತರಿಗೆ ಉಚಿತವಾಗಿ ಶಾಲಾ ಮಕ್ಕಳ ಮೂಲಕ ಸಸಿ ವಿತರಿಸಲಾಗುತ್ತಿದೆ. ಮನೆ ಮುಂದೆ, ಸುತ್ತಲಿನ ಪ್ರದೇಶದಲ್ಲಿ, ಜಮೀನುಗಳಲ್ಲಿ ನೆಟ್ಟು ಅವುಗಳನ್ನು ಬೆಳೆಸಬೇಕು’ ಎಂದರು.

ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಸ್‌.ಮುರಳೀಧರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ, ಗ್ರೇಟರ್‌ ಬಿಡದಿ ಪ್ರಾಧಿಕಾರದ ಅಧ್ಯಕ್ಷ ವರದರಾಜೇಗೌಡ, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಗನ್ನಾಥ್‌, ಮುಖಂಡರಾದ ಮಲವೇಗೌಡ, ಪ್ರವೀಣ್‌ಗೌಡ, ಶಿವರಾಮ್‌, ಅರವಿಂದೇಗೌಡ, ಜಿ.ನಾಗರಾಜು, ಪ್ರಶಾಂತ್‌, ನಾಗಾನಂದ, ಪ್ರಕಾಶ್‌, ಕೃಷ್ಣ, ವಿಜಯಕುಮಾರ್‌, ಶಿವರಾಜು, ಬಾಲಾಜಿ, ಜ್ಞಾನೇಶ್‌, ಮಲ್ಲೇಶ್‌, ಚಂದ್ರು ಇದ್ದರು.

ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ

ಮುಖ್ಯಮಂತ್ರಿಗಳ ಜನ್ಮ ದಿನದ ಅಂಗವಾಗಿ ಇಂದು ಎಲ್ಲ ರೀತಿಯ ಕಾಯಿಲೆ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಮ್ಮ ಆಸ್ಪತ್ರೆ ವತಿಯಿಂದ ಉಚಿತ ತಪಾಸಣೆ ನಡೆಸಿ, ಔಷಧಿ ನೀಡುತ್ತಿದ್ದೇವೆ. ಈಗ 300 ಬೆಡ್‌ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಇನ್ನೆರಡು ವರ್ಷದಲ್ಲಿ ಪೂರ್ಣಗೊಂಡು ಇಲ್ಲಿಂದ ಯಾವೊಬ್ಬ ರೋಗಿಯು ಬೆಂಗಳೂರಿಗೆ ಹೋಗದಂತೆ ಸೌಲಭ್ಯ ಕಲ್ಪಿಸಲಾಗುವುದು. ಎಲ್ಲ ರೀತಿಯ ಸೌಕರ್ಯಗಳು, ಸೌಲಭ್ಯಗಳು ಇಲ್ಲಿಯೇ ದೊರೆಯಲಿವೆ. ಗ್ರಾಮೀಣ ಭಾಗದ ಜನರಿಗಾಗಿ ವಿಶೇಷ ಆರೋಗ್ಯ ಸೇವೆ ಒದಗಿಸಲಾಗುವುದು. ಇಂದು ನಡೆಯುವ ತಪಾಸಣೆಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರಿಗೆ ಆಸ್ಪತ್ರೆ ವತಿಯಿಂದಲೇ ಉಚಿತ ಚಿಕಿತ್ಸೆ ದೊರಕಿಸಿಕೊಡಲಾಗುವುದು.

ಡಾ. ಅಶೋಕ್‌, ಡಾ.ಚಂದ್ರಮ್ಮ ದಯಾನಂದಸಾಗರ ವೈದ್ಯಕೀಯ ವಿಶ್ವ‌ವಿದ್ಯಾಲಯದ ಡೀನ್‌

ಎ.ಸಿ.ಯಿಂದ ಆರೋಗ್ಯ ತಪಾಸಣೆ

ರಾಮನಗರ ಜಿಲ್ಲಾ ಉಪ ವಿಭಾಗಾಧಿಕಾರಿ ಡಾ.ದಾಕ್ಷಾಯಿಣಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ರೋಗಿಗಳಿಗೆ ಆರೋಗ್ಯ ತಪಾಸಣೆಯನ್ನು ನಡೆಸಿ ತಮ್ಮ ವೈದ್ಯಕೀಯ ಸೇವೆಯನ್ನು ನೆನಪು ಮಾಡಿಕೊಂಡರು. ‘ತಹಶೀಲ್ದಾರ್‌ ಆಗುವುದಕ್ಕಿಂತ ಮುಂಚೆ ಸರ್ಕಾರಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದೆ. ವೈದ್ಯಕೀಯ ಸೇವೆ ನಡೆಯುವುದನ್ನು ನೋಡಿ ಸೇವೆ ಮಾಡಬೇಕೆಂದು ಮನಸ್ಸು ತುಡಿಯುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.