ADVERTISEMENT

ಮಾಗಡಿ: ವಾನರಸೇನೆಯ ಅನ್ನದಾತ- ದುಡಿದ ಹಣ ಪ್ರಾಣಿಗಳ ಆಹಾರಕ್ಕೆ ವಿನಿಯೋಗ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 5:18 IST
Last Updated 6 ನವೆಂಬರ್ 2022, 5:18 IST
ಸಾವನದುರ್ಗದ ಬಂಡೆಯ ಮೇಲೆ ಕುಳಿತು ಮಂಗಗಳಿಗೆ ಮುಸುಕಿನ ಜೋಳ ವಿತರಿಸುತ್ತಿರುವ ಜೋತಿನಗರದ ಧನಂಜಯ
ಸಾವನದುರ್ಗದ ಬಂಡೆಯ ಮೇಲೆ ಕುಳಿತು ಮಂಗಗಳಿಗೆ ಮುಸುಕಿನ ಜೋಳ ವಿತರಿಸುತ್ತಿರುವ ಜೋತಿನಗರದ ಧನಂಜಯ   

ಮಾಗಡಿ: ಪಟ್ಟಣದ ಸುತ್ತಮುತ್ತಲಿನ ಕಾಡುಮೇಡುಗಳಲ್ಲಿರುವ ಮಂಗ, ಪಶು, ಪಕ್ಷಿಗಳಿಗೆ ವಾರದಲ್ಲಿ ಒಂದು ದಿನ ಹಬ್ಬದೂಟದ ಸಂಭ್ರಮ!

ಜ್ಯೋತಿ ನಗರದ ಧನಂಜಯ ಅವರು ಬೆಟ್ಟಗುಡ್ಡಗಳಲ್ಲಿರುವ ಮಂಗ,ಪಶುಪ್ರಾಣಿ, ಪಕ್ಷಿಗಳನ್ನು ಹುಡುಕಿಕೊಂಡು ಹೋಗಿ ಹಣ್ಣು, ತರಕಾರಿ, ಮುಸಕಿನ ಜೋಳ ಆಹಾರ ಉಣ ಬಡಿಸುತ್ತಾರೆ. ಅವರ ಬರುವಿಕೆಗಾಗಿ ಮಂಗಗಳು, ಪಕ್ಷಿಗಳು ಕಾಯುತ್ತಿರುತ್ತವೆ.

ಕಾಡುಮೇಡುಗಳಲ್ಲಿ ಮಂಗ ಮತ್ತು ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ಹಣ್ಣಿನ ಗಿಡಮರಗಳು ಕಣ್ಮರೆಯಾಗಿವೆ. ಹಾಗಾಗಿ ಆಹಾರ ಇಲ್ಲದೆ ಮೂಕ ಪ್ರಾಣಿಗಳು ಪರದಾಡುತ್ತಿವೆ. ಹಾಗಾಗಿ ಅವುಗಳಿಗೆ ಆಹಾರ ಉಣಿಸುವ ಅಳಿಲು ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದೇನೆ ಎನ್ನುತ್ತಾರೆ ಧನಂಜಯ.

ADVERTISEMENT

ಸಾವನದುರ್ಗ, ಶಿವಗಂಗೆ, ಹುತ್ರಿದುರ್ಗ, ಹುಲಿಯೂರು ದುರ್ಗ, ತಿಪ್ಪಗೊಂಡನಹಳ್ಳಿ ಜಲಾಶಯಗಳತ್ತ ಸ್ಕೂಟರ್‌ನಲ್ಲಿ ತರಕಾರಿ ಚೀಲ ಇಟ್ಟುಕೊಂಡು ಹೋಗುವ ಧನಂಜಯ ಅವರನ್ನು ಕಂಡೊಡನೆ ಕೋತಿಗಳು ಹಿಂಡು ಹಿಂಡಾಗಿ ಅವರನ್ನು ಮುತ್ತಿಕೊಳ್ಳುತ್ತವೆ. ಅವರು ನೀಡುವ ಹಣ್ಣು, ತರಕಾರಿಗಳನ್ನು ಸವಿಯುತ್ತವೆ.

ಧನಂಜಯ ಅವರು ವಾರದಲ್ಲಿ ದುಡಿದ ಕೂಲಿ ಹಣದಲ್ಲಿ ಸ್ವಲ್ಪ ಹಣ ಉಳಿಸಿ ಪ್ರಾಣಿಗಳಿಗೆ ತರಕಾರಿ, ಹಣ್ಣು, ಮುಸಿಕಿನ ಜೋಳ
ಖರೀದಿಸುತ್ತಾರೆ.

‘ನಾವೊಬ್ಬರೆ ಬದುಕಿದರೆ ಸಾಲದು, ಮುಗ್ಧ ಮೂಕ ಪ್ರಾಣಿಗಳು ಬದುಕಬೇಕು’ ಎನ್ನುವ ಧನಂಜಯ ಅವರು, ಇದು ಪ್ರಚಾರಕ್ಕಾಗಿ ಮಾಡುವ ಕೆಲಸವಲ್ಲ. ಆತ್ಮ ತೃಪ್ತಿಗಾಗಿ ಮಾಡುವ ಕೆಲಸ. ಮೂರು ವರ್ಷಗಳಿಂದ ಮಂಗಗಳಿಗೆ ಆಹಾರ ನೀಡುವುದು ಮೊದಲ ಕೆಲಸವಾಗಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.