ADVERTISEMENT

ಮಾಗಡಿಯಲ್ಲಿ ಕೆನಾಲ್ ಕಿಚ್ಚು: ತುಮಕೂರು ಹಾಲು, ತರಕಾರಿಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:01 IST
Last Updated 1 ಜೂನ್ 2025, 14:01 IST
ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯಲ್ಲಿ ನೂತನ ಅಂಗನವಾಡಿ ಕಟ್ಟಡ ಕಟ್ಟಲು ಭೂಮಿ ಪೂಜೆಯನ್ನು ಶಾಸಕ ಬಾಲಕೃಷ್ಣ ನೆರವೇರಿಸಿದರು.
ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯಲ್ಲಿ ನೂತನ ಅಂಗನವಾಡಿ ಕಟ್ಟಡ ಕಟ್ಟಲು ಭೂಮಿ ಪೂಜೆಯನ್ನು ಶಾಸಕ ಬಾಲಕೃಷ್ಣ ನೆರವೇರಿಸಿದರು.   

ಮಾಗಡಿ: ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಗೆ ತಡೆಯೊಡ್ಡಿ ತುಮಕೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ಮಾಗಡಿಯಲ್ಲೂ  ಹೋರಾಟದ ಕಾವು ಹೆಚ್ಚಾಗಿದೆ.

ತುಮಕೂರಿನ ಹಾಲು, ತರಕಾರಿಗಳನ್ನು ಮಾಗಡಿ ತಾಲ್ಲೂಕಿನಲ್ಲಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ  ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಹೊಂಬಾಳಮ್ಮನಪೇಟೆ ಗ್ರಾಮದಲ್ಲಿ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸ್‌ಪ್ರೆಸ್ ಕೆನಾಲ್‌ಗೆ ಸಂಬಂಧಿಸಿದಂತೆ ಸೋಮವಾರದಿಂದ ಹೋರಾಟ ಆರಂಭಿಸುವುದಾಗಿ ಹೇಳಿದರು.

ತುಮುಲ್‌ನಿಂದ ಮಾಗಡಿ ತಾಲ್ಲೂಕು ಕುದೂರಿಗೆ ಹಾಲು ಸರಬರಾಜು ಆಗದಂತೆ ತಡೆಯುತ್ತೇವೆ. ತುಮಕೂರಿನಲ್ಲಿ ಬೆಳೆಯುವ ತರಕಾರಿ  ಮಾರಾಟ ತಡೆಯುತ್ತೇವೆ ಎಂದರು.

ADVERTISEMENT

‘ಸ್ನೇಹ ಮನೋಭಾವದಿಂದ ಹೋಗೋಣ ಎಂದು ತಾಳ್ಮೆಯಾಗಿ ಇದ್ದೆವು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ತೊಡೆತಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ. ಹೇಮಾವತಿ ನೀರು ಒಬ್ಬರಿಗೆ ಸೀಮಿತವಾಗಿಲ್ಲ. ನಮ್ಮ ಪಾಲಿನ ನೀರನ್ನು ನಾವು ಕೇಳುತ್ತಿದ್ದೇವೆ. ನಿಮ್ಮಲ್ಲೇ ವಾಲ್  ಇಟ್ಟುಕೊಂಡು ಹೇಮಾವತಿ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

ಕಾಮಗಾರಿ ಸ್ಥಳಕ್ಕೆ ನಾಳೆ ರೈತ ಸಂಘದ ನಿಯೋಗ

ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಗುಬ್ಬಿಗೆ ಹಸಿರು ಸೇನೆ ರೈತ ಸಂಘದ ನಿಯೋಗ ಸೋಮವಾರ ಭೇಟಿ ನೀಡಲಿದೆ ಎಂದು ತಾಲ್ಲೂಕು ಅಧ್ಯಕ್ಷ ಗೋವಿಂದರಾಜು ತಿಳಿಸಿದ್ದಾರೆ.

ಸೋಮವಾರ ಗುಬ್ಬಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದ ನಂತರ ಸಭೆ ಕರೆದು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋಡೆ ಕಟ್ಟಿ ತುಮಕೂರಿನ ಜನಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

‘ಕುಡಿಯುವ ನೀರು ತಡೆಯಲು ಯಾರಿಂದ ಆಗೋದಿಲ್ಲ. ನಮ್ಮ ಪಾಲಿನ ನೀರನ್ನು ಕೊಡಲು ಆಗುವುದಿಲ್ಲ ಎಂದು ಒಬ್ಬ ಜನಪ್ರತಿನಿಧಿ ಹೇಳುವುದು ಸರಿಯಲ್ಲ‘ ಎಂದರು.

‘ಹೇಮಾವತಿ ತುಮಕೂರಿಗೆ ಮಾತ್ರ ಸೀಮಿತವಾಗಿಲ್ಲ. ನಾವೂ ಕಾವೇರಿ ಕೊಳ್ಳದವರಾಗಿದ್ದು ನಮಗೂ ಹೇಮಾವತಿ ನೀರಿನ ಮೇಲೆ ಹಕ್ಕಿದೆ. ಮಾಗಡಿ ಜನತೆಯನ್ನು ಕೆಣಕಬೇಡಿ’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಸಭೆಯಲ್ಲಿ ಬಗಿನಗೆರೆ ರಂಗಸ್ವಾಮಿ ಧನಂಜಯ್ಯ ಕುಮಾರ್ ಚಿಕ್ಕಕಲ್ಯ ಶ್ರೀಧರ್ ಮಂಜು ತಾಳೆಕೆರೆ ಬೆಟ್ಟೇಗೌಡ ಕೇಶವ ಗಣೇಶ್ ಕೃಷ್ಣಪ್ ಐಯ್ಯಂಡಹಳ್ಳಿ ಮಂಜು ಮಂಚನಹಳ್ಳಿ ಹನುಮಯ್ಯ ಸಿದ್ದಾಪುರ ಶಿವಣ್ಣ ಭಾಗವಹಿಸಿದ್ದರು.

ತುಮಕೂರಿನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿರೋಧ ಹಿನ್ನಲೆಯಲ್ಲಿ ಸೋಮವಾರ ಕಾಮಗಾರಿ ಸ್ಥಳಕ್ಕೆ ರೈತ ಸಂಘದ ಅಧ್ಯಕ್ಷ‌ ಗೋವಿಂದರಾಜು ನೇತೃತ್ವದಲ್ಲಿ ಭೇಟಿ ಹಿನ್ನಲೆ ರೈತ ಮುಖಂಡ ಸಭೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.