
ಮಾಗಡಿ: ಹೇಮಾವತಿ ನೀರಾವರಿ ಯೋಜನೆ ಮಾಗಡಿ ತಾಲ್ಲೂಕಿಗೆ ತರಲು ಸಾಕಷ್ಟು ಶ್ರಮಿಸಿದ್ದಾಗಿ ಮಾಜಿ ಶಾಸಕ ಎ.ಮಂಜುನಾಥ ತಿಳಿಸಿದರು.
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಈ ಯೋಜನೆಗಾಗಿ ಡಿಪಿಆರ್ ಅನುಮೋದನೆ ಮೊದಲ ಹಂತದಿಂದ ಕೆಲಸ ಆರಂಭದವರೆಗೂ ದುಡಿದಿದ್ದೇನೆ ಎಂದರು.
ಯೋಜನೆಗೆ ಡಿಪಿಆರ್ ಅನುಮೋದನೆ ಪಡೆಯಲು ಪ್ರಯತ್ನಿಸಿದಾಗ ಶಾಸಕ ಬಾಲಕೃಷ್ಣ ಅವರು ಹೇಮಾವತಿ ನೀರು ಮಾಗಡಿಗೆ ಬರುವುದೇ ಎಂದು ಟೀಕಿಸಿದ್ದರು. ಆದರೆ, ಸರ್ಕಾರದಲ್ಲಿ ಪ್ರಯತ್ನಿಸಿ ಡಿಪಿಆರ್ ಅನುಮೋದನೆ ಪಡೆದು ಪ್ರತಿ ಹಳ್ಳಿಗೂ ಭೇಟಿ ನೀಡಿ 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತರಲಾಯಿತು. ಎಂಜಿನಿಯರ್ ನಾಗರಾಜು ಮತ್ತು ಎಂ.ಡಿ ಜಯಪ್ರಕಾಶ್ ಅವರು ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಿದರು. ಇದರ ಫಲವಾಗಿ ಮಾಗಡಿ ಕೋಟೆ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದರು. ಆ ಸಮಯದಲ್ಲಿ ಶಾಸಕ ಬಾಲಕೃಷ್ಣ ಅವರು ವೇದಿಕೆಗೆ ಬಂದು ಈ ಯೋಜನೆ ಅನುಷ್ಠಾನವಾಗದಿದ್ದರೆ ಕಾಂಗ್ರೆಸ್ಗೆ ಜನ ನೀರು ಬಿಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದನ್ನು ಅವರು ನೆನಪಿಸಿಕೊಂಡರು.
ಎಕ್ಸ್ಪ್ರೆಸ್ ಕಾಲುವೆ ಕಾಮಗಾರಿಗೂ ಇದಕ್ಕೂ ಸಂಬಂಧವಿಲ್ಲ. ಎಕ್ಸ್ಪ್ರೆಸ್ ಕಾಲುವೆ ಮೂಲಕ ನೀರು ಹರಿಸಿದರೂ ಅಭ್ಯಂತರವಿಲ್ಲ. ಎರಡು ವರ್ಷಕ್ಕೊಮ್ಮೆ ನಾಲೆ ಮೂಲಕವೇ ನೀರು ಹರಿದರೆ ಸಾಕು. ಕಾಂಗ್ರೆಸ್ ಸರ್ಕಾರ ಎಕ್ಸ್ಪ್ರೆಸ್ ಕಾಲುವೆ ಕಾಮಗಾರಿ ಮಾಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು.
ಜೆಡಿಎಸ್ ನೇತಾರರಾದ ಕೆಂಪೇಗೌಡ, ಮೂರ್ತಿ, ಎಂ.ಎನ್.ಮಂಜು, ವಿಜಯಕುಮಾರ್, ರಂಗಣಿ, ಪಂಚೆ ರಾಮಣ್ಣ, ನಾಗರಾಜು, ಕೆಂಪಸಾಗರ ಮಂಜುನಾಥ್, ವೆಂಕಟೇಶ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.