ಕನಕಪುರ: ಅಕ್ರಮವಾಗಿ ಜಿಂಕೆ ಬೇಟೆಯಾಡಿದ್ದ ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿಯ ವಿನೋದ್ ಕುಮಾರ್ (30) ಮತ್ತು ಮಾಯಂಡಿ (38) ಬಂಧಿತ ಆರೋಪಿಗಳು. ಜೂನ್ 7ರಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೋಡಿಹಳ್ಳಿ ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮನೆಯಲ್ಲಿ ಮಾಂಸವನ್ನು ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಡಿಹಳ್ಳಿ ಆರ್ಎಫ್ಒ ಆಂತೋನಿ ರೇಗೊ, ಉಪ ವಲಯ ಅರಣ್ಯಾಧಿಕಾರಿಗಳಾದ ದೀಪಕ್, ಚೇತನ್, ಅರಣ್ಯಗಸ್ತು ಪಾಲಕರಾದ ಜಗದೀಶ್, ಯತೀಶ್, ಅರಣ್ಯ ವೀಕ್ಷಕ ಮಾರುತಿ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿದಾಗ ಜಿಂಕೆಯ ಮಾಂಸ ಸಮೇತ ಸಿಕ್ಕಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅರಣ್ಯದೊಳಗೆ ಪ್ರವೇಶಿಸಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಜಿಂಕೆ ಮಾಂಸ, ಒಂದು ಜೊತೆ ಜಿಂಕೆಯ ಹಸಿ ಕುಂಬು ಮತ್ತು ಹಳೆಯ ನಾಲ್ಕು ಕೊಂಬು, ಒಂಟಿ ನಳಿಕೆ ಬಂದೂಕು ಹಾಗೂ ಮದ್ದನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.