
ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಹುಲ್ಲಿಸಿದ್ದೇಗೌಡನದೊಡ್ಡಿ ಗ್ರಾಮದ ಬಳಿಯ ಸರ್ಕಾರಿ ಗೋಮಾಳದ ಖಾಲಿ ಜಾಗದಲ್ಲಿ ಆಕ್ರಮವಾಗಿ ಮಣ್ಣು ಲೂಟಿ ಎಗ್ಗಿಲ್ಲದೆ ನಡೆಯುತ್ತಿದೆ.
ಕೈಗಾರಿಕಾ ಪ್ರದೇಶಕ್ಕೆ ಸೇರಿದ ಖಾಲಿ ಜಾಗದ ಜಮೀನಿನಲ್ಲಿ ಹಗಲು ರಾತ್ರಿ ಎನ್ನದೆ ಯಂತ್ರಗಳ ಮೂಲಕ ನಿರಂತರವಾಗಿ ಮಣ್ಣನ್ನು ಬಗೆಯಲಾಗುತ್ತಿದೆ. ಕಾರ್ಖಾನೆಗಳಿಗೆ ಮಣ್ಣು ಲೂಟಿ ಮಾಡಲಾಗುತ್ತಿದೆ.
ನಿತ್ಯ ನೂರಾರು ಲಾರಿಗಳು ರಸ್ತೆಗಳ ಮೂಲಕ ಸಂಚರಿಸುತ್ತಿವೆ. ನಿಗದಿಪಡಿಸಿದ್ದಕ್ಕಿಂತ ಅಧಿಕ ಪ್ರಮಾಣದಲ್ಲಿ ಮಣ್ಣು ಸಾಗಿಸಲಾಗುತ್ತಿದ್ದು ಅಧಿಕ ಭಾರಕ್ಕೆ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ.
ಸರಕಾರಿ ಜಾಗದಲ್ಲಿ ಮಣ್ಣು ತೆಗೆದು ಸಾಗಾಟ ಮಾಡಬೇಕಾದರೆ ಸ್ಥಳೀಯ ಆಡಳಿತದಿಂದ ಪರವಾನಿಗೆ ಪಡೆದು, ಮಣ್ಣು ತೆಗೆಯುವ ಪ್ರಮಾಣಕ್ಕೆ ಅನುಗುಣವಾಗಿ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಇದ್ಯಾವುದೂ ಮಾಡದ ಮಣ್ಣುಗಳ್ಳರು ರಾತ್ರಿ ಸಮಯದಲ್ಲಿ ಮಣ್ಣು ಸಾಗಣೆ ದಂಧೆ ಮಾಡುತ್ತಿದ್ದಾರೆ.
ಒಂದು ಟಿಪ್ಪರ್ ಲಾರಿಗೆ ಸುಮಾರು ₹15 ರಿಂದ ₹20 ಸಾವಿರದವರೆಗೂ ಬೆಲೆ ಇದೆ. ಈಗಾಗಲೇ ಸುಮಾರು ನೂರಾರು ಎಕರೆ ಪ್ರದೇಶದ ಮಣ್ಣಿನ ಗುಡ್ಡವನ್ನು ಕೊರೆದು ಲೂಟಿ ಮಾಡಲಾಗಿದೆ.
ಕೈಗಾರಿಕಾ ಪ್ರದೇಶಕ್ಕೆ ಸೇರಿದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದನ್ನು ಕಂದಾಯ, ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.