ADVERTISEMENT

ರಾಮನಗರ: ಬಿರು ಬಿಸಿಲಿಗೆ ಹೆಚ್ಚಿದ ಕಾಳ್ಗಿಚ್ಚು

ಎರಡೂವರೆ ತಿಂಗಳಲ್ಲಿ ರಾಮನಗರ ತಾಲ್ಲೂಕಿನಾದ್ಯಂತ 87 ಬೆಂಕಿ ಅನಾಹುತ ಘಟನೆ ವರದಿ

ಓದೇಶ ಸಕಲೇಶಪುರ
Published 17 ಮಾರ್ಚ್ 2025, 15:58 IST
Last Updated 17 ಮಾರ್ಚ್ 2025, 15:58 IST
ರಾಮನಗರ ಹೊರವಲಯದ ವಡೇರಹಳ್ಳಿ ಬಳಿ ಬೆಂಗಳೂರು–ಮೈಸೂರು ರಸ್ತೆ ವಿಭಜಕದ ಮಧ್ಯೆ ಇರುವ ಒಣಗಿದ ಹೂವಿನ ಗಿಡಗಳು ಹಾಗೂ ಹುಲ್ಲು ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹೊತ್ತಿ ಉರಿಯಿತು
ರಾಮನಗರ ಹೊರವಲಯದ ವಡೇರಹಳ್ಳಿ ಬಳಿ ಬೆಂಗಳೂರು–ಮೈಸೂರು ರಸ್ತೆ ವಿಭಜಕದ ಮಧ್ಯೆ ಇರುವ ಒಣಗಿದ ಹೂವಿನ ಗಿಡಗಳು ಹಾಗೂ ಹುಲ್ಲು ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹೊತ್ತಿ ಉರಿಯಿತು   

ರಾಮನಗರ: ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ರಾಮನಗರ ತಾಲ್ಲೂಕಿನಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾದಂತೆ, ಕಾಳ್ಗಿಚ್ಚು ಸಹ ಹೆಚ್ಚಾಗುತ್ತಿದೆ. ಸೂರ್ಯ ನೆತ್ತಿಗೆ ಬರುವ ಹೊತ್ತಿಗೆ ಹೊರಡೆಗೆ ಕಾಲಿಡುವುದಕ್ಕೂ ಆಗದಷ್ಟು ಬಿಸಿಲ ಝಳವಿದೆ. ಇದರಿಂದಾಗಿ ಕಾಳ್ಗಿಚ್ಚು ಸೇರಿದಂತೆ ಅಲ್ಲಲ್ಲಿ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.

ಅರಣ್ಯ ಪ್ರದೇಶಗಳು, ಕುರಚಲು ಗಿಡಗಳು, ಒಣಗಿದ ಹುಲ್ಲು, ರಸ್ತೆ ಬದಿಯ ಗಿಡಗಂಟಿ, ರೈತರ ಹೊಲ, ಮಾವಿನ ತೋಟ, ಅಡಿಕೆ ತೋಟ, ರಾಗಿ ಮೆದೆ, ತ್ಯಾಜ್ಯದ ರಾಶಿ, ಕೈಗಾರಿಕಾ ಪ್ರದೇಶ, ಬೆಟ್ಟಗುಡ್ಡಗಳಲ್ಲೂ ಬೆಂಕಿ ಕಾಣಿಸಿಕೊಳ್ಳುತ್ತಲೇ ಇದೆ. ಹೆದ್ದಾರಿಗಳಲ್ಲಿ ವಾಹನಗಳು ಸಹ ಬೆಂಕಿಗಾಹುತಿಯಾಗುತ್ತಿವೆ. ಕೆಲ ಘಟನೆಗಳು ಮನುಷ್ಯರಿಂದಲೇ ಸಂಭವಿಸಿದ್ದರೆ, ಇನ್ನುಳಿದವು ಅತಿಯಾದ ಬಿಸಿಲಿನ ಕಾರಣಕ್ಕೆ ಸಂಭವಿಸುತ್ತಿವೆ.

87 ಪ್ರಕರಣ ವರದಿ: ‘ಜನವರಿ ತಿಂಗಳಿಂದ ಇಲ್ಲಿಯವರೆಗೆ ರಾಮನಗರ ತಾಲ್ಲೂಕಿನಲ್ಲಿ ಸುಮಾರು 87 ಕಡೆ ಬೆಂಕಿ ಅನಾಹುತದ ಘಟನೆಗಳು ವರದಿಯಾಗಿವೆ. ಸಣ್ಣ ಹಾಗೂ ದೊಡ್ಡ ಅರಣ್ಯ ಪ್ರದೇಶಗಳಿಂದಿಡಿದು ರಸ್ತೆ ಬದಿ, ರೈತರ ಹೊಲ, ತೋಟ, ತ್ಯಾಜ್ಯದ ರಾಶಿಗಳಲ್ಲೂ ಘಟನೆಗಳು ನಡೆಯುತ್ತಿದ್ದು, ದಿನಕ್ಕೆ ಕನಿಷ್ಠ ಎರಡು ಕರೆಗಳು ಬರುತ್ತವೆ’ ಎಂದು ರಾಮನಗರ ಅಗ್ನಿಶಾಮಕ ಠಾಣಾಧಿಕಾರಿ ಮೋಹನ ಮುದಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೇಸಿಗೆಯಲ್ಲಿ ರಸ್ತೆ ಬದಿ, ಹೊಲ ಹಾಗೂ ತೋಟದಲ್ಲಿ ಬೆಳೆದಿರುವ ಹುಲ್ಲು ಒಣಗಿರುತ್ತದೆ. ಅದನ್ನು ಸ್ವಚ್ಛಗೊಳಿಸುವ ಬದಲು ಜನರೇ ಬೆಂಕಿ ಹಚ್ಚುತ್ತಾರೆ. ಇದರಿಂದ ಸುಲಭವಾಗಿ ಒಣಗಿದ ಹುಲ್ಲು ತೆರವಾಗುತ್ತದೆ ಎಂಬುದು ಜನರ ಭಾವನೆ. ಇಂತಹ ಬೆಂಕಿ ಪ್ರಕರಣಗಳೇ ಇತ್ತೀಚೆಗೆ ಹೆಚ್ಚಾಗಿವೆ. ಈ ಕುರಿತು ಕರೆ ಬಂದ ಎಷ್ಟೋ ಕಡೆಗೆ ನಾವು ಹೋಗುವಷ್ಟರಲ್ಲಿ ಬೆಂಕಿ ತಾನಾಗಿ ನಂದಿ ಹೋಗಿರುತ್ತದೆ’ ಎಂದು ಹೇಳಿದರು.

ತ್ಯಾಜ್ಯಕ್ಕೆ ಬೆಂಕಿ: ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಸ್ಥಳೀಯರೇ ಬೆಂಕಿ ಹಚ್ಚುತ್ತಾರೆ. ಪ್ಲಾಸ್ಟಿಕ್ ಸೇರಿದಂತೆ ಇತರ ರೀತಿಯ ತ್ಯಾಜ್ಯಗಳು ಬೆಂಕಿಯಲ್ಲಿ ಉರಿದು ಬೂದಿಯಾಗುತ್ತವೆ. ಕೆಲವೊಮ್ಮೆ ಅಕ್ಕಪಕ್ಕ ಇರುವ ಆಸ್ತಿಪಾಸ್ತಿಗೂ ಹಾನಿಯಾಗುವುದುಂಟು.

‘ಬೆಂಕಿ ಘಟನೆಗೆ ಸಂಭವಿಸಿದಂತೆ ದಿನಕ್ಕೆ ಕನಿಷ್ಠ ಎರಡು ಕರೆಗಳು ಬರುತ್ತವೆ. ಅವುಗಳಲ್ಲಿ ದೊಡ್ಡ, ಮಧ್ಯಮ, ಸಣ್ಣ, ಅತಿ ಸಣ್ಣ ಎಂಬುದಾಗಿ ವಿಂಗಡಣೆ ಮಾಡಿಕೊಂಡು ನಾವು ಕಾರ್ಯಾಚರಣೆ ನಡೆಸುತ್ತೇವೆ. ವಾಹನಗಳ ಎಂಜಿನ್‌ಗಳಲ್ಲಿ ಉಷ್ಠಾಂಶ ಹೆಚ್ಚಾಗಿ ರಸ್ತೆಯಲ್ಲಿ ಬೆಂಕಿಗೆ ಆಹುತಿಯಾದಾಗಲೂ ಸ್ಥಳಕ್ಕೆ ಹೋಗಿ ಬೆಂಕಿ ಆರಿಸುತ್ತೇವೆ. ನಮ್ಮ ವ್ಯಾಪ್ತಿ ಮೀರಿದ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ, ನಮಗೂ ಕರೆ ಬರುತ್ತದೆ. ಆಗ ನಾವೂ ಸಹ ಅಲ್ಲಿಗೆ ಹೋಗಿ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತೇವೆ’ ಎಂದು ಮೋಹನ ಮುದಿಗೌಡ ತಿಳಿಸಿದರು.

ಅರಣ್ಯದಲ್ಲಿ ಬೀಟಿಂಗ್ ವ್ಯವಸ್ಥೆ: ಅರಣ್ಯ‍ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಾಗ ಅಗ್ನಿಶಾಮಕ ವಾಹನಗಳು ಸುಲಭವಾಗಿ ಅಲ್ಲಿಗೆ ಹೋಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಬೀಟಿಂಗ್ ವ್ಯವಸ್ಥೆಯನ್ನು ಅಗ್ನಿಶಾಮಕ ಇಲಾಖೆ ಮಾಡಿಕೊಂಡಿದೆ. ಎರಡೂ ಇಲಾಖೆಯವರ ನೇತೃತ್ವದ ಈ ಬೀಟಿಂಗ್ ಸಿಬ್ಬಂದಿ ಅಗ್ನಿ ಕಾಣಿಸಿಕೊಂಡಾಗ ನಂದಿಸುವ ಕಾರ್ಯಾಚರಣೆ ಕೈಗೊಳ್ಳುತ್ತಾರೆ.

ಜಲ ವಾಹನವು 4,500 ಲೀಟರ್ ಸಾಮರ್ಥ್ಯದ್ದಾಗಿರುವುದರಿಂದ ಬೆಂಕಿ ನಂದಿಸಲು ಕೆಲವೊಮ್ಮೆ ಅಷ್ಟು ನೀರು ಸಹ ಸಾಲುವುದಿಲ್ಲ. ಅದಕ್ಕಾಗಿ ಪಂಪ್ ಬಳಸಿ ಸ್ಥಳೀಯವಾಗಿಯೇ ಸಿಗುವ ಕೆರೆ, ಹಳ್ಳ ಅಥವಾ ಇತರ ನೀರಿನ ಮೂಲಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸುತ್ತೇವೆ. ಇದರಿಂದಾಗಿ ನೀರು ತುಂಬಿಸಿಕೊಳ್ಳುವುದಕ್ಕಾಗಿ ವಾಪಸ್ ಠಾಣೆಗೆ ಬರುವುದು ತಪ್ಪುತ್ತದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದರು.

ಅರಣ್ಯ, ರಸ್ತೆ ಬದಿ, ಸಾರ್ವಜನಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವುದಕ್ಕೆ ಮುಂಚೆ ಹೆಚ್ಚಿನ ಆಸ್ತಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಜನರು ಸಹ ಲಭ್ಯ ನೀರನ್ನು ಬಳಸಿಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಬೇಕು. ಅಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಠಾಣೆಯು ಸಾರ್ವಜನಿಕರಿಗೆ ಉಚಿತವಾಗಿ ತರಬೇತಿ ನೀಡುತ್ತದೆ ಎನ್ನುತ್ತಾರೆ ಸಿಬ್ಬಂದಿ.

ರಾಮನಗರ ಹೊರಲವಯದ ಅರ್ಚಕರಹಳ್ಳಿ ಬಳಿ ಬೆಂಗಳೂರು–ಮೈಸೂರು ರಸ್ತೆ ಬದಿ ಬೆಳೆದಿದ್ದ ಹುಲ್ಲು ಹಾಗೂ ಇತರ ಗಿಡಗಂಟಿಗಳು ಬೆಂಕಿಯಿಂದಾಗಿ ಸುಟ್ಟು ಹೋಗಿವೆ
ರಾಮನಗರ ತಾಲ್ಲೂಕಿನ ಕೆರೆಮೇಗಳದೊಡ್ಡಿಯಲ್ಲಿ ತೋಟವು ಬೆಂಕಿಗೆ ಆಹುತಿಯಾಗಿರುವುದು
ಅಗ್ನಿ ಅವಘಡಕ್ಕೆ ಕರೆ ಮಾಡಬೇಕಾದ ಸಂಖ್ಯೆ* 080 22971500: ಅಗ್ನಿಶಾಮಕ ಕಂಟ್ರೊಲ್ ರೂಂ
ಕೈಗಾರಿಕಾ ಪ್ರದೇಶಕ್ಕಿಂತ ಹೆಚ್ಚಾಗಿ ಅರಣ್ಯ ಹೊಲ ತೋಟ ರಸ್ತೆ ಬದಿ ತ್ಯಾಜ್ಯದ ರಾಶಿ ಕೆಲವೊಮ್ಮೆ ಸಣ್ಣ–ಪುಟ್ಟ ತಯಾರಿಕಾ ಘಟಕಗಳಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದೆ. ಸಾರ್ವಜನಿಕರು ಕೂಡಲೇ ಠಾಣೆಗೆ ಮಾಹಿತಿ ನೀಡಿದರೆ ಹೆಚ್ಚಿನ ಹಾನಿ ತಡೆಯಬಹುದು
ಮೋಹನ ಮುದಿಗೌಡ ಠಾಣಾಧಿಕಾರಿ ರಾಮನಗರ ಅಗ್ನಿಶಾಮಕ ಠಾಣೆ
ಬೇಕಿದೆ ಮತ್ತೊಂದು ಜಲ ವಾಹನ
‘ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದ್ಯಕ್ಕೆ ನಮ್ಮ ಬಳಿ 4500 ಸಾವಿರ ಲೀಟರ್ ಸಾಮರ್ಥ್ಯದ ಜಲವಾಹನ ಹಾಗೂ ಸಣ್ಣ ಪ್ರಮಾಣದ ಅಗ್ನಿ ನಂದಿಸುವ ಅಗ್ನಿ ಬುಲೆಟ್ ಇದೆ. ಜೊತೆ ನೀರಿಗೆ ಬಿದ್ದ ಮನುಷ್ಯರು ಮತ್ತು ಪ್ರಾಣಿಗಳನ್ನು ರಕ್ಷಿಸಲು ರೆಸ್ಕ್ಯೂ ವ್ಯಾನ್ ಇದೆ. ಜಿಲ್ಲಾ ಕೇಂದ್ರವಾದ ರಾಮನಗರದ ಸುತ್ತಮುತ್ತ ಕುರುಚಲು ಕಾಡಿನಿಂದ ಆವೃತ್ತವಾದ ಬೆಟ್ಟಗುಡ್ಡಗಳಿವೆ. ಬಿಡದಿ ಕೈಗಾರಿಕಾ ಪ್ರದೇಶವಿರುವುದರಿಂದ ಇಲ್ಲಿಗೆ ಮತ್ತೊಂದು ಜಲವಾಹನದ ಅಗತ್ಯವಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ತಾಲ್ಲೂಕಿಗೆ ಠಾಣಾಧಿಕಾರಿ ಸೇರಿದಂತೆ 33 ಹುದ್ದೆಗಳು ಮಂಜೂರಾಗಿದ್ದು ಸದ್ಯ 27 ಮಂದಿ ಇದ್ದಾರೆ’ ಎಂದು ಮೋಹನ ಮುದಿಗೌಡ ತಿಳಿಸಿದರು. ಉಚಿತ ಅಗ್ನಿ ಸುರಕ್ಷತಾ ತರಬೇತಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಇಲಾಖೆಯು ವಾರಕ್ಕೆ ಮೂರು ದಿನ ಉಚಿತವಾಗಿ ತರಬೇತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳುತ್ತದೆ. ಶಾಲಾ–ಕಾಲೇಜು ಆಸ್ಪತ್ರೆ ಕೈಗಾರಿಕಾ ಪ್ರದೇಶ ಪೆಟ್ರೋಲ್ ಬಂಕ್ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ನಡೆಸುತ್ತೇವೆ. ಕಾರ್ಖಾನೆ ಕಂಪನಿ ಸಂಘ–ಸಂಸ್ಥೆಗಳು ಸೇರಿದಂತೆ ಯಾರೇ ಕರೆದರೂ ಸ್ಥಳಕ್ಕೆ ತೆರಳಿ ಉಚಿತವಾಗಿ ತರಬೇತಿ ನೀಡುತ್ತೇವೆ. ನಮ್ಮ ಠಾಣೆಗೆ ಬಂದರೂ ತರಬೇತಿ ಜೊತೆಗೆ ಪ್ರಾತ್ಯಕ್ಷಿಕೆ ಸಹ ನೀಡುತ್ತೇವೆ. ಅದಕ್ಕಾಗಿ ಸಾರ್ವಜನಿಕರು ನಮಗೆ ಒಂದು ಮನವಿ ಪತ್ರ ಕೊಟ್ಟರೆ ಸಾಕು. ತುರ್ತು ಪರಿಸ್ಥಿತಿ ಹಾಗೂ ಅಗ್ನಿ ಅವಘಡ ಸಂಭವಿಸಿದಾಗ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳೇನು? ಎಂಬುದರ ಕುರಿತು ತರಬೇತಿ ನೀಡಿ ತುರ್ತು ಪರಿಸ್ಥಿತಿ ನಿಭಾಯಿಸಲು ಅಣಿಗೊಳಿಸುತ್ತೇವೆ ಎನ್ನುತ್ತಾರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು.
ಪ್ರಾಣಿ–ಪಾಕ್ಷಿಗಳಿಗೂ ಆಪತ್ತು
ಬೇಸಿಗೆಯಲ್ಲಿ ಅರಣ್ಯ ಪ್ರದೇಶ ತೋಟ ಹಾಗೂ ಹೊಲಗಳಲ್ಲಿ ಹೆಚ್ಚಾಗಿರುವ ಅಗ್ನಿ ಅನಾಹುತವು ಪ್ರಾಣಿ–ಪಾಕ್ಷಿಗಳಿಗೆ ಆಪತ್ತು ಉಂಟುಮಾಡಿದೆ. ಇಲ್ಲಿನ ಹಂದಿಗುಂದಿ ಬೆಟ್ಟ ರಾಮದೇವರ ಬೆಟ್ಟ ಜಲಸಿದ್ದೇಶ್ವರ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಬಹುತೇಕ ಹುಲ್ಲು ಸೇರಿದಂತೆ ಕುರುಚಲು ಕಾಡಿನಿಂದ ಆವೃತವಾಗಿದೆ. ಬಿಸಿಲ ಝಳಕ್ಕೆ ಹುಲ್ಲು ಒಣಗಿರುವುದರಿಂದ ಕೆಲವೊಮ್ಮೆ ಕಿಡಿಗೇಡಿಗಳು ಹಚ್ಚುವ ಬೆಂಕಿಯಿಂದಾಗಿ ಅಥವಾ ಬೀಡಿ–ಸಿಗರೇಟ್ ಸೇದಿ ಹುಲ್ಲಿನತ್ತ ಎಸೆಯುವುದರಿಂದಲೂ ಬೆಂಕಿ ಹೊತ್ತಿಕೊಂಡು ಉರಿಯುವುದುಂಟು. ಇದರಿಂದಾಗಿ ಪ್ರಾಣಿ–ಪಕ್ಷಿಗಳ ಆವಾಸ ಸ್ಥಾನಕ್ಕೆ ಕುತ್ತಾಗುತ್ತದೆ. ಅವುಗಳ ಗೂಡುಗಳು ಸುಟ್ಟು ಹೋಗುತ್ತವೆ. ಕೆಲವೊಮ್ಮೆ ಪ್ರಾಣಿ–ಪಕ್ಷಿಗಳು ಸಹ ಕಾಳ್ಗಿಚ್ಚಿಗೆ ಬಲಿಯಾಗುವುದುಂಟು. ಜೊತೆಗೆ ಆಹಾರದ ಅಭಾವವು ಉಂಟಾಗುತ್ತದೆ. ರಸ್ತೆ ಬದಿ ಸಂಭವಿಸುವ ಬಹುತೇಕ ಬೆಂಕಿ ಘಟನೆಗೆ ಬೀಡಿ–ಸಿಗರೇಟ್ ಸೇದಿ ಬೆಂಕಿ ಆರಿಸದೆ ಹಾಗೆಯೇ ಒಣಗಿದ ಹುಲ್ಲಿನ ಮೇಲೆ ಎಸೆಯುವುದೇ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.