ಮಾಗಡಿ: ‘ರಂಗಕಲೆ ಉಳಿಸಲು ಶ್ರಮಿಸುತ್ತಿರುವ ರಂಗ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ ಸರ್ಕಾರ ಸವಲತ್ತು ನೀಡಬೇಕು’ ಎಂದು ರಂಗ ನಿರ್ದೇಶಕ ಎಚ್.ಎಂ. ನಾರಾಯಣಪ್ಪ ಒತ್ತಾಯಿಸಿದರು.
ರಂಗನಾಥಸ್ವಾಮಿ ದನಗಳ ಜಾತ್ರೆ ಅಂಗವಾಗಿ ಹೊಸಪೇಟೆ ಸರ್ಕಲ್ನಲ್ಲಿ ರಂಗನಾಥಸ್ವಾಮಿ ಕೃಪಾಪೋಷಿತ ಕಲಾ ಸಂಘದಿಂದ ಶುಕ್ರವಾರ ರಾತ್ರಿ ನಡೆದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಜಿಲ್ಲಾಡಳಿತ ನಾಟಕ ಪ್ರದರ್ಶನಕ್ಕೆ ನೀಡಿರುವ ತಡೆಯನ್ನು ತೆರವುಗೊಳಿಸಬೇಕು. ಪೌರಾಣಿಕ ನಾಟಕಾಭಿನಯವಿಲ್ಲದೆ ಹಸಿವಿನಿಂದ ನರಳುತ್ತಿರುವ ರಂಗ ಕಲಾವಿದರ ಸಂಕಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಪೌರಾಣಿಕ ನಾಟಕದಿಂದಾಗಿ ಸಮಾಜದಲ್ಲಿ ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬಹುದು. ಸಿನಿಮಾ ನಟರಿಗೆ ಕೊಡುವ ಗೌರವವನ್ನು ರಂಗ ಕಲಾವಿದರಿಗೆ ನೀಡದೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಪಟ್ಟಣದಲ್ಲಿ ಭೂತ ಬಂಗಲೆಯಂತಿರುವ ಕೆಂಪೇಗೌಡ ಬಯಲು ರಂಗಮಂದಿರವನ್ನು ದುರಸ್ತಿಪಡಿಸಿ ಕಲಾವಿದರ ಸಂಘದ ವಶಕ್ಕೆ ಒಪ್ಪಿಸಬೇಕು ಎಂದು
ಹೇಳಿದರು.
ಪುರಸಭೆ ಸದಸ್ಯರಾದ ಎಚ್.ಆರ್. ಶಿವಕುಮಾರ್, ಆಶಾರಾಣಿ ರಘು, ಕಾಂಗ್ರೆಸ್ ಮುಖಂಡ ಬಿ.ವಿ. ಜಯರಾಮ್, ಹೊಸಪೇಟೆಯ ಎಚ್.ಕೆ. ರಾಜಣ್ಣ, ಚಿಕ್ಕನರಸಿಂಹಯ್ಯ, ಎಚ್.ಎಂ. ಜಯಸಿಂಹ, ಕಲಾವಿದರಾದ ಗಾರೆ ವೆಂಕಟೇಶ್, ನರಸಿಂಹಮೂರ್ತಿ, ಶಿವಕುಮಾರ್, ಎಚ್.ಎನ್. ವೆಂಕಟೇಶ್, ಕೆ.ಎಸ್. ಮಂಜುನಾಥ ಇದ್ದರು. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾ
ಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.