ರಾಮನಗರ: ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಹಣದ ದರ್ಪದಿಂದ ಎಚ್.ಡಿ. ಕುಮಾರಸ್ವಾಮಿ ದಂಪತಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಹೇಳಿದರು.
"ರಾಮನಗರ ಕ್ಷೇತ್ರದಲ್ಲಿ ಕಳೆದ 20 ವರ್ಷದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಿವಿಲ್ಲದಿದ್ದರೆ ಅವರು ಚರ್ಚೆಗೆ ಬರಲಿ. ಈ ಕುರಿತು ಅವರೇ ದಿನಾಂಕ ಮತ್ತು ಸ್ಥಳ ನಿಗದಿ ಪಡಿಸಲಿ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
"ರಾಮನಗರ ತಾ.ಪಂ. ಅಧ್ಯಕ್ಷರ ಆಯ್ಕೆ ಹಾಗೂ ಎಪಿಎಂಸಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕೆಲವು ಜೆಡಿಎಸ್ ಸದಸ್ಯರಿಗೆ ಅಧಿಕಾರ ಹಾಗೂ ಹಣದ ಆಮಿಷವೊಡ್ಡಿ ಕಾಂಗ್ರೆಸ್ಗೆ ಸೆಳೆದಿದ್ದಾರೆ. ಆದರೆ ಇದು ಹೆಚ್ಚು ಕಾಲ ನಡೆಯದು. ದೇವೇಗೌಡರ ಕಾಲದಿಂದ ಇಲ್ಲಿಯವರೆಗೂ ಜೆಡಿಎಸ್ ಎಂದಿಗೂ ಒಡೆದು ಆಳುವ ನೀತಿ ಅನುಸರಿಸಿಲ್ಲ. ರಾಜಕೀಯವಾಗಿ ಎಲ್ಲಿಯೂ ಕುತಂತ್ರ ಮಾಡಲಿಲ್ಲ. ಆದರೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಅನ್ಯ ಪಕ್ಷಗಳ ಮುಖಂಡರನ್ನು ಸೆಳೆದು ನಾವು ಅವರಿಗೆ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮನಗರ ತಾ.ಪಂ. ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಇದ್ದರೂ, ಅಧಿಕಾರ ಲಾಲಸೆಯಿಂದ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಹಾಲಿ ಅಧ್ಯಕ್ಷ ಭದ್ರಯ್ಯ ಹಾಗೂ ಸದಸ್ಯ ಎಸ್.ಪಿ.ಜಗದೀಶ್ ವಿರುದ್ಧ ನಾಯಕರಿಗೆ ವರದಿ ನೀಡಲಾಗಿದೆ. ಈ ಸಂಬಂಧ ವರಿಷ್ಠರು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ಮುಖಂಡರಾದ ದೊರೆಸ್ವಾಮಿ, ಚಿಕ್ಕವೀರೇಗೌಡ, ಸಾಬನ್ ಸಾಬ್ ಪ್ರಸಾದ್, ಹೊಟೇಲ್ ಉಮೇಶ್, ಗೂಳಿಗೌಡ, ರವಿ, ಫರ್ವೇಜ್ ಪಾಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.