
ರಾಮನಗರ: ‘ಮಾನವ ಜನಾಂಗಕ್ಕೆ ಸನ್ಮಾರ್ಗ ತೋರುತ್ತಾ ಕೈವಾರ ತಾತಯ್ಯ ಅವರ ಕಾಲಜ್ಞಾನ ಇಂದಿಗೂ ಪ್ರಸ್ತುತವಾಗಿದೆ. ಇಂತಹ ಮಹನೀಯರ ಜಯಂತಿ ಆಚರಣೆಗಳ ಮೂಲಕ ಅವರ ವಿಚಾರಧಾರೆಗಳನ್ನು ಪುನರ್ಮನನ ಮಾಡಿ ಜನರಿಗೆ ತಿಳಿಸಿ ಕೊಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಹೇಳಿದರು.
ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾತಯ್ಯ ಅವರು ಒಂದೇ ಸಮುದಾಯಕ್ಕೆ ಸೀಮಿತರಾಗಿಲ್ಲ. ಎಲ್ಲಾ ಸಮುದಾಯಕ್ಕೂ ಸೇರಿದವರಾಗಿದ್ದಾರೆ. ನಾರಾಯಣಪ್ಪ ಮೂಲ ಹೆಸರಿನ ಅವರು, ಕೈವಾರ ತಾತಯ್ಯ ಎಂದು ಪ್ರಸಿದ್ಧರಾಗಿದ್ದರು. 110 ವರ್ಷ ಬದುಕಿದ್ದ ಅವರು, ಕಾಲಜ್ಞಾನ ನುಡಿಯುತ್ತಿದ್ದರು’ ಎಂದರು.
ಸಮುದಾಯದ ಮುಖಂಡ ಸುರೇಶ್ ಮಾತನಾಡಿ, ‘ಶರಣರು, ಸಂತರು ಹಾಗೂ ದಾರ್ಶನಿಕರ ನುಡಿಗಳು ಇಂದಿಗೂ ಜನಸಾಮಾನ್ಯರ ಬದುಕನ್ನು ಹಸನಗೊಳಿಸುವ ಮತ್ತು ವಿಚಾರವಂತರನ್ನಾಗಿ ಮಾಡುತ್ತಿವೆ. ಜನರಲ್ಲಿ ನೈತಿಕ ಪ್ರಜ್ಞೆಯನ್ನು ಅರಳಿಸುವ ನಿಟ್ಟಿನಲ್ಲಿ ಮಹನೀಯರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಅಭಿಪ್ರಾಯಪಟ್ಟಿವೆ.
‘ಅನಕ್ಷರತೆ ಮತ್ತು ಮೂಢನಂಬಿಕೆಗಳು ನಾಗರಿಕ ಸಮಾಜವನ್ನು ಹಿನ್ನಡೆಯತ್ತ ಕೊಂಡೊಯ್ಯುತ್ತಿವೆ. ಇವುಗಳಿಂದ ಹೊರಬಂದು ಜ್ಞಾನಾರ್ಜನೆಯಲ್ಲಿ ತೊಡಗಿ ಸಮಾಜವನ್ನು ಮುನ್ನಡಿಸಬೇಕು ಎಂದು ಕೈವಾರ ತಾತಯ್ಯನವರು ತಮ್ಮ ಗೀತೆ, ವಚನಗಳಿಂದ ಸಾರಿದರು’ ಎಂದು ಹೇಳಿದರು.
ಬಲಿಜ ಸಮುದಾಯದ ಮುಖಂಡರಾದ ಕಿಶೋರ್ ನಾಯ್ಡು, ಕೃಷ್ಣ, ಬಾಲರಾಜು, ಹನುಮಯ್ಯ, ರಾಮಾಂಜನೇಯ, ರಾಮಣ್ಣ, ರಾಮಚಂದ್ರ, ಅನಂತ ಪದ್ಮನಾಥ, ಗೋಪಾಲಕೃಷ್ಣ, ಮಂಜು, ಶ್ರೀನಿವಾಸ, ರಾಮಸ್ವಾಮಿ, ನರೇಂದ್ರಬಾಬು, ಸುಶ್ಮಿತಾ, ನರಸಿಂಹಯ್ಯ, ಪದ್ಮನಾಬ್, ನರೇಂದ್ರ ಸೇರಿದಂತೆ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.