ಮಾಗಡಿ: ‘ಕವಿ, ದಾರ್ಶನಿಕ ಮತ್ತು ದಾಸರಾಗಿ ಅನನ್ಯ ಅನುಭವಗಳ ಮೂಲಕ ಸಮಾಜವನ್ನು ಗ್ರಹಿಸಿ ಬಾಳ್ವೆಯೇ ಬೆಳಕು ಎಂಬುದಾಗಿ ಬದುಕಿ, ಬೆಳಕಿನ ಮೂಲವನ್ನು ದರ್ಶಿಸಿದವರು ಕನಕದಾಸರು’ ಎಂದು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಸವಾನಂದ ಸ್ವಾಮೀಜಿ ತಿಳಿಸಿದರು.
ಮಾಗಡಿ–ಬೆಂಗಳೂರು ಮುಖ್ಯ ರಸ್ತೆಯ ತಾವರೆಕೆರೆಯ ಪಾರಂಪರಿಕ ಆಧ್ಯಾತ್ಮ ಕೇಂದ್ರ ಹಠಯೋಗಿ ಕಾಳಪ್ಪ ಸ್ವಾಮಿ ಮಠದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಮಾತನಾಡಿದರು.
ಕನಕದಾಸ ತಮ್ಮ ಗ್ರಂಥಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅದರಲ್ಲಿ ನಳಚರಿತೆ, ರಾಮಧಾನ್ಯ ಚರಿತೆ,
ಮೋಹನ ತರಂಗಿಣಿ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಶ್ರೇಷ್ಠ ಕೊಡುಗೆಗಳು ಎಂದು ಪ್ರತಿಪಾದಿಸಿದರು.
ತಾವರೆಕೆರೆ ಹಠಯೋಗಿ ಕಾಳಪ್ಪ ಸ್ವಾಮಿ ಮಠದ ರೇವಣಸಿದ್ದಯ್ಯ ಗುರುಗಳು ಮಾತನಾಡಿ, ಸಮಾಜದ ವರ್ಗ ಸಂಘರ್ಷಗಳನ್ನು ಮೀರಿ ಸ್ವಯಂ ಪ್ರತಿಭೆಯಿಂದ ಅಸಾಧಾರಣ ಅನುಭವ ಪಡೆದು ಸಾಹಿತ್ಯ ಮತ್ತು ಕೀರ್ತನೆಗಳನ್ನು ಬರೆದವರು ಕನಕದಾಸರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಮಾನವ ಕುಲ ಒಂದೇ ಎಂಬ ಭಾವ ಅರಿಯಲು ಜಾತಿ ಭಾವಗಳನ್ನು ತೊರೆದು ಸಾಮರ್ಥ್ಯಗಳಿಗೆ ಮನ್ನಣೆ ದೊರಕಬೇಕೆಂದು ಹೋರಾಡಿದರು. ಆಧ್ಯಾತ್ಮದಲ್ಲೂ ಸಂಘರ್ಷಗಳನ್ನು ಆರೋಗ್ಯಕರವಾಗಿ ಕಟ್ಟಿಕೊಟ್ಟವರು ಕನಕದಾಸರು. ಕನಕದಾಸರನ್ನು ಮನುಕುಲದ ರಾಯಭಾರಿ ಎಂದು ಪರಿಭಾವಿಸಬೇಕು. ಯಾವುದೇ ಜಾತಿಗೆ ಸೀಮಿತಗೊಳಿಸಬಾರದು ಎಂದರು.
ಶಾಲಾ–ಕಾಲೇಜುಗಳು, ವಿಶ್ವ ವಿದ್ಯಾಲಯಗಳು ಮತ್ತು ಗ್ರಂಥಾಲಯಗಳಲ್ಲಿ ಕನಕದಾಸರ ಸಾಹಿತ್ಯದ ಪುಸ್ತಕಗಳು ಹೆಚ್ಚು ದೊರಕುವಂತಾಗಬೇಕು ಎಂದರು.
ಕಾರ್ತಿಕ ಸೋಮವಾರದ ಪ್ರಯುಕ್ತ ದೀಪೋತ್ಸವ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ಪ್ರಣವಲಿಂಗ ಮಹಾಸ್ವಾಮಿ, ಶಿವಮೊಗ್ಗದ ರಾಮಲಿಂಗೇಶ್ವರ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ, ಶಿಕ್ಷಕ ಟಿ.ಎನ್.ಚಿಕ್ಕವೀರಯ್ಯ, ಪೂಜಾರ್ ಕೃಷ್ಣಪ್ಪ, ನರಸಿಂಹಯ್ಯ, ರೇವಣ್ಣ, ರವಿಕಿರಣ, ನಾರಾಯಣ, ಅನಿಲ್, ಚಂದ್ರಶೇಖರ್, ಚಿಕ್ಕರಾಜು, ಚೇತನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.