
ಕನಕಪುರ: ಸಿಲಿಂಡರ್ ಪೈಪ್ನಲ್ಲಿ ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಇಲ್ಲಿನ ರಾಮನಗರ ರಸ್ತೆಯಲ್ಲಿರುವ ಅಮರ ನಾರಾಯಣ ಬ್ಲಾಕ್ ನಿವಾಸಿ ಪ್ರಶಾಂತ್ (22) ಮೃತ ಯುವಕ.
ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಸೋಮವಾರ ಮನೆ ಮುಂಭಾಗದಲ್ಲಿ ಕಾರದ ತಿಂಡಿಗಳನ್ನು ಎಣ್ಣೆಯಲ್ಲಿ ಕರಿಯುವಾಗ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ತಂದೆ ಸಿದ್ದರಾಜು, ತಾಯಿ ಸವಿತಾ ಗಾಯಗೊಂಡಿದ್ದರು.
ಈ ವೇಳೆ ಪ್ರಶಾಂತ್ ಹೊಟ್ಟೆ, ಕೈ ಮತ್ತು ಮುಖದ ಭಾಗದ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಮೂವರು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಗಳವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಪ್ರಶಾಂತ್ ಮೃತಪಟ್ಟಿದ್ದಾನೆ ಪೊಲೀಸರು ತಿಳಿಸಿದ್ದಾರೆ.
ಅವರ ತಂದೆ ಮತ್ತು ತಾಯಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಅಂತ್ಯಸಂಸ್ಕಾರ ಮಂಗಳವಾರ ದೇಗುಲಮಠದ ರುದ್ರ ಭೂಮಿಯಲ್ಲಿ ನೆರವೇರಿತು.