ADVERTISEMENT

‘ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಮಾಸ್ತಿ’

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 14:40 IST
Last Updated 9 ಜೂನ್ 2019, 14:40 IST
ಚನ್ನಪಟ್ಟಣದ ಕಸಾಪ ಕಚೇರಿಯಲ್ಲಿ ನಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಚನ್ನಪಟ್ಟಣದ ಕಸಾಪ ಕಚೇರಿಯಲ್ಲಿ ನಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ಚನ್ನಪಟ್ಟಣ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಸರಳ, ಸಜ್ಜನ ವ್ಯಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಚಲುವರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಕಸಾಪ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ಕಥೆಗಳ ಜನಕನೆಂದು ಖ್ಯಾತವಾಗಿರುವ ಅವರು ಕನ್ನಡದ ಆಸ್ತಿ ಎಂದರು.

ದಕ್ಷಿಣ ಭಾರತದ ಐದಾರು ಭಾಷೆಯ ಸಾಹಿತ್ಯಗಳ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಕ್ಕೆ ಕೀರ್ತಿ ತಂದವರು. ತಮ್ಮ ಚಿಕ್ಕವೀರ ರಾಜೇಂದ್ರ ಕೃತಿಗೆ ನಾಲ್ಕನೇ ಜ್ಞಾನಪೀಠ ಪ್ರಶಸ್ತಿ ತಂದುಕೊಡುವುದರ ಮೂಲಕ ಕನ್ನಡಕ್ಕೆ ಸ್ಥಾನಮಾನ ತಂದುಕೊಟ್ಟವರು ಎಂದರು.

ADVERTISEMENT

ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ ಮಾತನಾಡಿ, ಸಾಹಿತ್ಯ ಪ್ರಕಾರದ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಇವರು ಮೈಸೂರು ಮಹಾರಾಜರಿಂದ ರಾಜಸೇವಾ ಪ್ರಸಕ್ತ ಎಂಬ ಬಿರುದನ್ನು ಗಳಿಸಿದ್ದರು. ಕನ್ನಡ ಸಾಹಿತ್ಯದ ಸವ್ಯಸಾಚಿಯಂತೆ ಕೆಲಸ ಮಾಡಿದವರು. ಇವರು ತಮ್ಮ ಹದಿನೆಂಟನೆ ವಯಸ್ಸಿಗೆ ರಂಗನ ಮದುವೆ ಎಂಬ ಕಥೆಯನ್ನು ಬರೆದವರು. ಆಗಿನ ಮೈಸೂರು ಪ್ರಾಂತ್ಯದಲ್ಲಿ ಐ.ಸಿ.ಎಸ್. ಪರೀಕ್ಷೆಯನ್ನು ಪಾಸು ಮಾಡಿ ಜಿಲ್ಲಾಧಿಕಾರಿಯಾಗಿದ್ದರು ಎಂದರು.

ತಾಲ್ಲೂಕು ಕಸಾಪ ಪದಾಧಿಕಾರಿಗಳಾದ ಸಿ.ಕೆ.ಹರೀಶ್, ಮಂಜುನಾಥ್, ಎ.ಮನೋಹರ್, ಕುಮಾರ್, ನಾರಾಯಣಮೂರ್ತಿ, ಸೋಮಶೇಖರ್, ಗೋಪಿ, ಚೇತನ್, ಪೂರ್ಣಚಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.