ADVERTISEMENT

‘ಕಸದ ಬದಲು ವಿಷ ಕೊಡಿ’

ಕಣ್ವ ಬಳಿ ತ್ಯಾಜ್ಯ ವಿಲೇವಾರಿ ಘಟಕ ಬೇಡ: ಮುಖ್ಯಮಂತ್ರಿಗೆ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:45 IST
Last Updated 18 ಜೂನ್ 2019, 14:45 IST
ಕಣ್ವ ಜಲಾಶಯದ ಬಳಿ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿದರು
ಕಣ್ವ ಜಲಾಶಯದ ಬಳಿ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿದರು   

ರಾಮನಗರ: ‘ಕಣ್ವ ಗ್ರಾಮದ ಬಳಿ ಕಸ ವಿಲೇವಾರಿ ಮಾಡಬೇಡಿ. ಮಾಡುವುದೇ ಆದರೆ ಅದಕ್ಕೂ ಮುನ್ನ ನಮಗೆ ವಿಷ ಕೊಡಿ’ ಎಂದು ಗ್ರಾಮಸ್ಥರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಲ್ಲಿ ಅಳಲು ತೋಡಿಕೊಂಡರು.

ಕಣ್ವ ಜಲಾಶಯದ ಬಳಿ ಮಂಗಳವಾರ ಶಾಶ್ವತ ನೀರಾವರಿ ಯೋಜನೆಗೆ ಭೂಮಿಪೂಜೆ ಸಂದರ್ಭ ಮುಖ್ಯಮಂತ್ರಿಗೆ ಅವರು ಅಹವಾಲು ಸಲ್ಲಿಸಿದರು. ‘ಕೆಲವು ವರ್ಷದ ಹಿಂದೆ ಕಣ್ವ ಬಳಿ ಕಸ ವಿಲೇವಾರಿ ಮಾಡಿದ್ದು, ಇದರಿಂದಾಗಿ ಸುತ್ತಲಿನ ಪರಿಸರ ಹಾಳಾಗಿತ್ತು. ಅಂತರ್ಜಲವೂ ಕಲುಷಿತಗೊಂಡಿತ್ತು. ಜನರ ಹೋರಾಟದಿಂದ ಎಚ್ಚೆತ್ತ ಅಧಿಕಾರಿಗಳು ಕಸ ವಿಲೇವಾರಿ ನಿಲ್ಲಿಸಿದ್ದರು. ಆದರೆ ಮತ್ತೆ ಇಲ್ಲಿಯೇ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದಕ್ಕೆ ಗ್ರಾಮಸ್ಥರ ಒಪ್ಪಿಗೆಯಿಲ್ಲ’ ಎಂದು ತಿಳಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಣ್ವದಲ್ಲಿ ಕಸ ವಿಲೇವಾರಿ ಮಾಡಲು ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಈ ಹಿಂದೆ ಕಣ್ವದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾಗ ಸ್ಥಳೀಯ ಸಂಸ್ಥೆಗಳು ವೈಜ್ಞಾನಿಕವಾಗಿ ವಿಲೇವಾರಿ ಮಾಡದ ಹಿನ್ನಲೆಯಲ್ಲಿ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ. ಒಟ್ಟಿನಲ್ಲಿ ಎಲ್ಲಿಯಾದರೂ, ಕಸ ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರ. ಮಹೇಶ್‌ ಜೊತೆಗಿದ್ದರು.

ಮುಖ್ಯಮಂತ್ರಿ ನೋಡಲೆಂದು ಬಂದರು: ಶಾಲೆ, ರಸ್ತೆ, ನೀರು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಜನರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಅದಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರನ್ನು ಕಾಣಲು ಬಂದವರೇ ಹೆಚ್ಚಾಗಿದ್ದರು. ಪೊಲೀಸರ ಬಿಗಿ ಭದ್ರತೆಯಿಂದಾಗಿ ಕೆಲವರು ಹತ್ತಿರ ಹೋಗಲು ಪರದಾಡಿದರು. ಅಭಿಮಾನಿಯೊಬ್ಬರು ಕುಮಾರಣ್ಣನಿಗಾಗಿ ನೇರಳೆ ಹಣ್ಣು ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.