ಚನ್ನಪಟ್ಟಣ: ‘ಇಂದಿನ ಕಾಲಕ್ಕೆ ಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಲ್ಲಿ ಕರಾಟೆ ಕಲಿಯುವಿಕೆ ಅನಿವಾರ್ಯವಾಗಿದೆ’ ಎಂದು ನಿವೃತ್ತ ಸೈನಿಕ ದೇವಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ನ್ಯೂ ಆಕ್ಸ್ಫರ್ಡ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಇಂಡಿಯನ್ ಆಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ ನ ಪ್ರಥಮ ವಾರ್ಷಿಕೋತ್ಸವ, ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ಕರಾಟೆ ಸಾಧಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆತ್ಮರಕ್ಷಣೆ ವಿದ್ಯೆ ಪ್ರತಿಯೊಬ್ಬರಿಗೂ ಬೇಕಾಗಿದೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಅವಶ್ಯಕವಾಗಿದೆ. ಎಲ್ಲರೂ ಕರಾಟೆ ಕಲಿತುಕೊಳ್ಳಬೇಕು ಎಂದರು.
ಕರಾಟೆ ಮಾಸ್ಟರ್ ಸೋಗಾಲ ಗೋಪಾಲ್ ಅವರು ಇಂಡಿಯನ್ ಆಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ ಸ್ಥಾಪಿಸಿ ಆ ಮೂಲಕ ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.
ಸೋಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ಕಲೆ ಅವಶ್ಯಕವಾಗಿ ಬೇಕಾಗಿದೆ. ಪೋಷಕರು ಈ ಬಗ್ಗೆ ಯೋಚಿಸಬೇಕಾಗಿದೆ ಎಂದರು.
ಕೋಡಂಬಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ. ಮಹೇಶ್, ಕರಾಟೆ ಮಾಸ್ಟರ್ ಗೋಪಾಲ್, ಮಾರ್ಷಲ್ ಆರ್ಟ್ಸ್ ನ ಪದಾಧಿಕಾರಿಗಳಾದ ಎಸ್.ವಿ. ಶ್ರೀನಿವಾಸ್, ಪ್ರಮಿಳಾ, ಸಾಮಾಜಿಕ ಕಾರ್ಯಕರ್ತ ಕೋಡಿಪುರ ಲೋಕೇಶ್, ಕರಾಟೆ ಶಿಕ್ಷಕರಾದ ಲೋಕೇಶ್, ಮಯಿಲ್ ಸಾಮಿ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಈಚೆಗೆ ನಡೆದ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಜಯಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.