ADVERTISEMENT

ಕೆಚ್ಚೆದೆಯ ಹೋರಾಟಗಾರ ಶಿವಾಜಿ: ನವೀನ್ ಕುಮಾರ್ ಶಿಂಧೆ

ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ; ಚಿತ್ರಕ್ಕೆ ಗಣ್ಯರಿಂದ ಪುಷ್ಪನಮನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:45 IST
Last Updated 20 ಫೆಬ್ರುವರಿ 2026, 4:45 IST
ರಾಮನಗರದ ಕಂದಾಯ ಭವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಶಿವಾಜಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ನವೀನ್ ಕುಮಾರ್ ಶಿಂಧೆ, ಶ್ರೀನಿವಾಸ್ ರಾವ್ ನಲಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಹಾಗೂ ಸಮುದಾಯದ ಇತರ ಮುಖಂಡರು ಇದ್ದಾರೆ
ರಾಮನಗರದ ಕಂದಾಯ ಭವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಶಿವಾಜಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮುಖಂಡರಾದ ನವೀನ್ ಕುಮಾರ್ ಶಿಂಧೆ, ಶ್ರೀನಿವಾಸ್ ರಾವ್ ನಲಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಹಾಗೂ ಸಮುದಾಯದ ಇತರ ಮುಖಂಡರು ಇದ್ದಾರೆ   

ರಾಮನಗರ: ‘ಯುದ್ದತಂತ್ರದ ನಿಪುಣ ಹಾಗೂ ಅಖಂಡ ಭಾರತದ ಕನಸು ಕಂಡಿದ್ದ ಛತ್ರಪತಿ ಶಿವಾಜಿ ಅವರು, ಕೆಚ್ಚೆದೆಯ ಹೋರಾಟಗಾರರಾಗಿದ್ದರು. ತಮ್ಮ ಅವಧಿಯಲ್ಲಿ ಜನಪರವಾಗಿ ಆಡಳಿತ ನಡೆಸಿದ್ದ ಶಿವಾಜಿ, ಜನರ ಮಹಾರಾಜ ಎಂದೇ ಜನಪ್ರಿಯರಾಗಿದ್ದರು’ ಎಂದು ಮರಾಠ ಸಮುದಾಯದ ಮುಖಂಡ ನವೀನ್ ಕುಮಾರ್ ಶಿಂಧೆ ಬಣ್ಣಿಸಿದರು.

ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮಕ್ಕೆ ಛತ್ರಪತಿ ಶಿವಾಜಿಯವರ ಕೊಡುಗೆ ಅಪಾರವಾಗಿದೆ’ ಎಂದರು.

‘ಶಿವಾಜಿ ಮಹಾರಾಜರು ಯುದ್ಧ ಕಲೆ, ಕತ್ತಿ ವರಸೆ, ಕುದುರೆ ಸವಾರಿಯನ್ನು ತನ್ನ ಗುರುಗಳಾದ ದಾದಾಜಿ ಕೊಂಡದೇವ ಅವರಿಂದ ಕಲಿತಿದ್ದರು. ಮಹಾಪುರುಷ ರಾಮದಾಸ ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವ ಮೂಲಕ ಆದರ್ಶ ರಾಜರಾಗಿದ್ದರು. ಕೇವಲ ಒಂದೇ ಸಮುದಾಯಕ್ಕೆ ಸೀಮಿತರಾಗದೇ ಎಲ್ಲಾ ವರ್ಗದವರ ಜನಾನುರಾಗಿಯಾಗಿದ್ದರು’ ಎಂದು ಹೇಳಿದರು.

ADVERTISEMENT

ಸಮುದಾಯದ ಮುಖಂಡರೂ ಹಾಗೂ ಶಾಂತಲಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ, ‘ಸೇನಾಧಿಕಾರಿ ಮಗನಾಗಿದ್ದ ಶಿವಾಜಿ ಅವರು ದೂರದೃಷ್ಟಿಯೊಂದಿಗೆ ಆಡಳಿತ ನಡೆಸಿದ ಮಹಾರಾಜರಾಗಿದ್ದರು. ಅವರ ಮೇಲೆ ತಾಯಿ ಜೀಜಾಬಾಯಿ ಅವರು ತುಂಬಾ ಪ್ರಭಾವ ಬೀರಿದ್ದರು’ ಎಂದರು.

‘ದೂರದೃಷ್ಟಿಯೊಂದಿಗೆ ಉತ್ಮತ ಆಡಳಿತ ನಡೆಸಿದ ಶಿವಾಜಿ ಅವರ ಮಾನವೀಯ ಮೌಲ್ಯಗಳು, ಸಾಂಸ್ಕೃತಿಕ ಹಿರಿಮೆಗಳು, ಸೌಹಾರ್ದದ ನಿಲುವುಗಳು ಸರ್ವಕಾಲಕ್ಕೂ ಆದರ್ಶಪ್ರಾಯವಾಗಿವೆ. ಅಂತಹ ಮಹಾನ್ ಪುರುಷರ ಆದರ್ಶವನ್ನು ಎಲ್ಲರೂ ಪಾಲಿಸುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಮಾತನಾಡಿ, ‘ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಗೆ ಹೋರಾಡಿದವರು. ಇಂದಿನ ನೌಕಾಪಡೆಗೆ ಅಂದೇ ಪ್ರಬಲ ತಳಪಾಯ ಹಾಕಿಕೊಟ್ಟವರು. ಅವರ ಶೌರ್ಯ, ಸಾಹಸ ಹಾಗೂ ರಾಷ್ಟ್ರಭಕ್ತಿ ನಮಗೆಲ್ಲಾ ಪ್ರೇರಣೆಯಾಗಿದೆ’ ಎಂದರು.

ಸಮುದಾಯದ ಮುಖಂಡ ಶ್ರೀನಿವಾಸ್ ರಾವ್ ನಲಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ನಾರಾಯಣ್ ರಾವ್ ಚವ್ಹಾಣ್, ಶಂಕರ ರಾವ್ ಚವ್ಹಾಣ್, ತುಕಾರಾಂ ರಾವ್ ಖಾಂತೆ ಸೇರಿದಂತೆ ವಿವಿಧ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.