ಚನ್ನಪಟ್ಟಣ: ನಗರದ ಅಂಬೇಡ್ಕರ್ ಪ್ರತಿಮೆ ಎದುರು ದಲಿತ ಸಂಘಟನೆಗಳ ವತಿಯಿಂದ ಸೋಮವಾರ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೋರೆಗಾಂವ್ ಭಾವಚಿತ್ರಕ್ಕೆ ದಲಿತ ಸಮುದಾಯದ ಮುಖಂಡ ಮತ್ತೀಕೆರೆ ಹನುಮಂತಯ್ಯ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಭಾರತದಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ವಿಜಯವನ್ನು ಪ್ರತಿಯೊಬ್ಬರೂ ನೆನೆಸಿಕೊಳ್ಳುವುದು ಅವಶ್ಯ. ಮಹಾರ್ ಸೈನಿಕರು ತಮ್ಮ ಸ್ವಾಭಿಮಾನಕ್ಕಾಗಿ ಮಾಡಿ ಜಯಗಳಿಸಿದ ಯುದ್ಧ. 1818 ಜನವರಿ 1ರ ಮಹಾರ್ ಸೈನಿಕರು ಅಂದಿನ ಅಸಮಾನತೆ, ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ನಡೆದ ಯುದ್ಧ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಇದರ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿ, ಇದರ ಬಗ್ಗೆ ಎಲ್ಲರಿಗೂ ತಿಳಿಸಿಕೊಟ್ಟರು. ಜತೆಗೆ ಅಂಬೇಡ್ಕರ್ ಅವರು ಜೀವನಪರ್ಯಂತ ಪ್ರತಿ ಹೊಸ ವರ್ಷದ ಮೊದಲ ದಿನದಂದು ಭೀಮಾ ನದಿ ತೀರದಲ್ಲಿನ ಕೋರೆಗಾಂವ್ ವಿಜಯದ ಸಂಕೇತವಾಗಿ ನಿಲ್ಲಿಸಿರುವ ಸ್ತೂಪದ ಸ್ಥಳಕ್ಕೆ ತೆರಳಿ, ಮಹಾರ್ ಸ್ವಾಭಿಮಾನಿ ಸೈನಿಕರ ತ್ಯಾಗ, ಬಲಿದಾನವನ್ನು ನೆನೆಯುತ್ತಿದ್ದರು ರಂದು ತಿಳಿಸಿದರು.
ದಲಿತ ಮುಖಂಡ ಅಕ್ಕೂರು ಶೇಖರ್ ಮಾತನಾಡಿ, ನಾವುಗಳು ಹೊಸ ವರ್ಷದ ಮೊದಲ ದಿನ ಭೀಮಾ ಕೋರೆಗಾಂವ್ ಜಯದ ಇತಿಹಾಸವನ್ನು ಸಂಭ್ರಮಿಸುವ ಜತೆಗೆ ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡೋಣ ಎಂದರು.
ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಸಿಹಿ ಹಂಚಿ, ಅಂಬೇಡ್ಕರ್ ಮತ್ತು ಮಹಾರ್ ಸೈನಿಕರಿಗೆ ಜೈಕಾರ ಕೂಗಿದರು.
ದಲಿತ ಮುಖಂಡರಾದ ಕೋಟೆ ಸಿದ್ದರಾಮಯ್ಯ, ಸಿ.ಕುಮಾರ್, ಕುಮಾರ್ ಚಿಕ್ಕೇನಹಳ್ಳಿ, ಶ್ರೀನಿವಾಸ್ ಮೂರ್ತಿ, ವೆಂಕಟೇಶ್, ಕೋಟೆ ಶ್ರೀನಿವಾಸ್, ಕಿರಣ್ ಕುಮಾರ್, ದೇವರಾಜು, ಹನುಮಂತು, ಅರುಣ ರಾಂಪುರ, ಕೊಡಂಬಹಳ್ಳಿ ಹನುಮಂತು, ಸಂಕಲಗೆರೆ ಕೃಷ್ಣ, ಭರತ್ ಕುಮಾರ್, ಕೃಷ್ಣಯ್ಯ, ಸತೀಶ್, ಲಕ್ಷ್ಮಣ್ ರಾಂಪುರ, ನೀಲಸಂದ್ರ ಶಿವು, ಚಕ್ಕೆರೆಯ ಗಂಗಾ, ಸಿದ್ದರಾಜು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.