ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಬಿಡದಿಯಲ್ಲಿ 11.5 ಮೆಗಾವಾಟ್ ಸಾಮರ್ಥ್ಯದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ ನಿರ್ಮಾಣವಾಗಲಿದೆ.
₹260 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಥಾವರಕ್ಕೆ ನಿಗಮ ಹಾಗೂ ಪಾಲಿಕೆ ಸಮನಾಗಿ ಬಂಡವಾಳ ಹೂಡಲಿವೆ. ಇದರ ನಿರ್ವಹಣೆ ಜವಾಬ್ದಾರಿ ನಿಗಮ ವಹಿಸಿಕೊಂಡಿದೆ.
‘ಇತ್ತೀಚೆಗೆ ನಡೆದ ಸಭೆಯಲ್ಲಿ ಕೆಪಿಸಿಎಲ್ನ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಯೋಜನೆಗೆ ಅನುಮೋದನೆ ನೀಡಿದ್ದು, ಎರಡು ವರ್ಷದ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಕೆಪಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಯೋಜನೆಯ ನಿರ್ಮಾಣದ ಹೊಣೆಯನ್ನು ನೊಯಿಡಾದ ಐಎಸ್ಜಿಇಸಿ ಹೆವಿ ಎಂಜಿನಿಯರಿಂಗ್ ಲಿಮಿಟೆಡ್ ಹಾಗೂ ಹಿತಾಚಿ ಜೋಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಸಂಸ್ಥೆಗಳಿಗೆ ನೀಡಲಾಗಿದೆ.
‘ಆತ್ಮನಿರ್ಭರ್ ಭಾರತ’ ಯೋಜನೆಯಡಿ ನಿರ್ಮಾಣವಾಗಲಿರುವ ಈ ಸ್ಥಾವರದಿಂದ ಬೆಂಗಳೂರಿನಲ್ಲಿ ಪ್ರತಿದಿನ ಸಂಗ್ರಹವಾಗುವ 600 ಟನ್ ತ್ಯಾಜ್ಯವನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು.
ಇದರಿಂದ ನಗರದ ಶೇ 25ರಷ್ಟು ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದು. ಸ್ಥಾವರದಿಂದ ಪಾಲಿಕೆಗೆ ವಾರ್ಷಿಕ ₹14 ಕೋಟಿಯಷ್ಟು ತ್ಯಾಜ್ಯ ನಿರ್ವಹಣಾ ವೆಚ್ಚ ಉಳಿತಾಯ ಆಗಲಿದೆ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.