ADVERTISEMENT

ಯೋಜನೆ ಹಣ ದುರ್ಬಳಕೆ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 14:04 IST
Last Updated 20 ಆಗಸ್ಟ್ 2020, 14:04 IST

ರಾಮನಗರ: ಜನನಿ ಸುರಕ್ಷಾ ಯೋಜನೆ ಅಡಿ ಬಾಣಂತಿಯರಿಗೆ ಸೇರಬೇಕಿದ್ದ ₹1.46 ಲಕ್ಷ ಹಣ ದುರ್ಬಳಕೆ ಆಗಿದ್ದು, ಈ ಸಂಬಂಧ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ ತಾಲ್ಲೂಕು ಆರೋಗ್ಯಾಕಾರಿ ಶಶಿಕಲಾ ಹಾಗು ಹಿರಿಯ ಇನ್‌ಸ್ಪೆಕ್ಟರ್‌ ಖಾತೆಯಿಂದ ಈ ಹಣ ನಾಪತ್ತೆ ಆಗಿದೆ. ಈ ಇಬ್ಬರೂ ಅಧಿಕಾರಿಗಳ ನಕಲಿ ಸಹಿ ಬಳಸಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಖಾತೆಯಿಂದ ಈ ಹಣ ಡ್ರಾ ಆಗಿದೆ. ಈ ಸಂಬಂಧ ತಾಲ್ಲೂಕು ಆರೋಗ್ಯಾಧಿಕಾರಿ ಶಶಿಕಲಾ ಪ್ರಕರಣ ದಾಖಲಿಸಿದ್ದಾರೆ.

ಜನನಿ ಸುರಕ್ಷಾ ಯೋಜನೆಯಡಿ ಮನೆಯಲ್ಲಿ ಹೆರಿಗೆ ಆದರೆ ₹500 ಪ್ರೋತ್ಸಾಹ ಧನ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆದಲ್ಲಿ ₹700, ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಹೆರಿಗೆಯಾದಲ್ಲಿ ₹1500 ಪ್ರೋತ್ಸಾಹ ಧನವನ್ನು ಇಲಾಖೆ ನೀಡಬೇಕಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಇವು ಫಲಾನುಭವಿಗಳಿಗೆ ವಿತರಣೆ ಆಗಬೇಕಿತ್ತು. ಈ ಹಣವೇ ದುರ್ಬಳಕೆ ಆಗಿದೆ.

ADVERTISEMENT

'ನನ್ನ ಹಾಗೂ ಸೀನಿಯರ್ ಇನ್ಸೆಪೆಕ್ಟರ್ ಇಬ್ಬರ ಸಹಿಯನ್ನು ನಕಲಿ ಮಾಡಿ, ಹಣ ಡ್ರಾ ಮಾಡಲಾಗಿದೆ. ಆದರೆ, ಆರೋಪಿ ಯಾರು ಎಂಬುದೇ ತಿಳಿದಿಲ್ಲ. ಹೀಗಾಗಿ ಇದರ ಉಸ್ತುವಾರಿ ಹೊತ್ತಿದ್ದ ಅಕೌಂಟೆಂಟ್ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ’ ಎಂದು ಶಶಿಕಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.