ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ರೇವಣ್ಣ ಅವರ ನಾಟಿಕೋಳಿ ಫಾರಂ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಸತ್ತಿರುವ ಕೋಳಿಗಳು
ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ನಾಟಿಕೋಳಿ ಫಾರಂಗೆ ನುಗ್ಗಿದ ಚಿರತೆಯೊಂದು 900ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ. ರೇವಣ್ಣ ಎಂಬುವರು ತಮ್ಮ ತೋಟದಲ್ಲಿ ಮಾಡಿರುವ ಕೋಳಿಫಾರಂ ಗ್ಯಾಲರಿ ಮುರಿದು ಶುಕ್ರವಾರ ರಾತ್ರಿ ಒಳ ನುಗ್ಗಿರುವ ಚಿರತೆ ಹಲವು ಕೋಳಿಗಳನ್ನು ಕೊಂದು ತಿಂದಿದ್ದರೆ, ಉಳಿದವುಗಳ ರಕ್ತ ಹೀರಿದೆ. ಬೆಳಿಗ್ಗೆ ರೇವಣ್ಣ ಅವರು ಕೋಳಿಫಾರಂಗೆ ಹೋಗಿ ನೋಡಿದಾಗ ಘಟನೆ ಗೊತ್ತಾಗಿದೆ.
ತೋಟದಲ್ಲಿ ಸುಮಾರು 3,500 ಕೋಳಿಗಳನ್ನು ಸಾಕುತ್ತಿದ್ದೇನೆ. ಚಿರತೆ ದಾಳಿಯಿಂದಾಗಿ ಹೆಚ್ಚಿನ ನಷ್ಟವಾಗಿದೆ. ಅರಣ್ಯ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕು. ಈ ಭಾಗದಲ್ಲಿ ದಿನದಿಂದ ದಿನಕ್ಕೆ ಚಿರತೆಗಳ ಹಾವಳಿ ಹೆಚ್ಚಾಗಿದ್ದು ದನ–ಕರು, ನಾಯಿ ಹಾಗೂ ಕೋಳಿಗಳ ಮೇಲಿ ಚಿರತೆ ದಾಳಿ ಸಾಮಾನ್ಯವಾಗಿದೆ. ಜನರು ಆತಂಕದಲ್ಲೇ ಓಡಾಡಬೇಕಿದೆ ಎಂದು ರೇವಣ್ಣ ಹೇಳಿದರು.
ವಿಷಯ ತಿಳಿದು ಅರಣ್ಯ ಇಲಾಖೆಯ ರಾಮನಗರ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಗ ರೇವಣ್ಣ ಹಾಗೂ ಸ್ಥಳೀಯರು ಗ್ರಾಮದ ಸುತ್ತಮುತ್ತ ಇರುವ ಚಿರತೆಗಳನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಡಬೇಕು ಎಂದು ಒತ್ತಾಯಿಸಿದರು. ನಷ್ಟ ಅನುಭವಿಸಿರುವ ರೇವಣ್ಣ ಅವರಿಗೆ ಸೂಕ್ತ ಪರಿಹಾರದ ಜೊತೆಗೆ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವುದಾಗಿ ಮನ್ಸೂರ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.