ADVERTISEMENT

ವಿಮೆ ಮೇಲಿನ ಜಿಎಸ್‌ಟಿ ರದ್ದತಿಗೆ ಒತ್ತಾಯ

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 16:04 IST
Last Updated 21 ಜನವರಿ 2020, 16:04 IST
ಮಂಗಳವಾರ ನಡೆದ ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡ ಅತಿಥಿಗಳು
ಮಂಗಳವಾರ ನಡೆದ ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡ ಅತಿಥಿಗಳು   

ರಾಮನಗರ: ‘ಜೀವನ ಭದ್ರತೆಗಾಗಿ ವಿಮೆ ಪಾಲಿಸಿ ಮಾಡಿಸುವವರ ಮೇಲೆ ಜಿಎಸ್ ಟಿ ಶುಲ್ಕದ ಹೊರೆಯಾಗಿದೆ. ಇದರಿಂದ ಪಾಲಿಸಿದಾರರು, ಏಜೆಂಟರ ಕಮಿಷನ್‌ಗೂ ಹೊಡೆತ ಬೀಳುತ್ತಿದೆ ಎಂದು ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿಂಗಾರಪು ಶ್ರೀನಿವಾಸ್ ಹೇಳಿದರು.

ಇಲ್ಲಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ಶೈಕ್ಷಣಿಕ ಮತ್ತು ಪ್ರತಿನಿಧಿಗಳ ಸಮಾವೇಶದಲ್ಲಿ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಇವತ್ತು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. 60 ವರ್ಷಗಳಿಂದಲೂ ವಿಮೆ ಪಾಲಿಸಿಯ ಏಜೆಂಟರ ಕಮಿಷನ್‌ ಹೆಚ್ಚಳ ಮಾಡಿಲ್ಲ. ಸಾಮಾನ್ಯ ಜನರಿಗೆ ಸೇವೆ ಒದಗಿಸುತ್ತಿರುವವರಿಗೆ ಸರ್ಕಾರ ನಿಯಮಾನುಸಾರ ಕನಿಷ್ಠ ಕೂಲಿ ₨18 ನಿಗದಿ ಮಾಡಿದೆ. ಆದರೆ, ಕಮಿಷನ್‌ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಏಜೆಂಟರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದರು.

ವಿಮಾ ಕಂತು ಮೇಲಿನ ಜಿಎಸ್‌ಟಿ ತೆಗೆದು ಹಾಕಬೇಕು. ಪಾಲಿಸಿದಾರರ ಬೋನಸ್ ಅನ್ನು ಹೆಚ್ಚಳ ಮಾಡಬೇಕು. ಐಆರ್‌ಡಿಎ ಪ್ರಕಾರ ಪ್ರತಿನಿಧಿಗಳ ಕಮಿಷನ್ ಹೆಚ್ಚಳ ಮಾಡಬೇಕು. ಪ್ರತಿನಿಧಿಗಳ ಗ್ರೂಪ್ ಇನ್ಶುರೆನ್ಸ್ ಮತ್ತು ಗ್ರಾಚ್ಯುಟಿಯನ್ನು ಹೆಚ್ಚಳ ಮಾಡಬೇಕು. ಸಿ.ಎಲ್.ಐ.ಎ ಗಳ ಬೇಡಿಕೆಯನ್ನು ಈಡೇರಿಸಬೇಕು. ಕ್ಲಬ್ ಸದಸ್ಯರಲ್ಲದ ಪ್ರತಿನಿಧಿಗಳ ಮೆಡಿಕ್ಲೈಮ್ ಬೇಡಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಗ್ರಾಚ್ಯುಟಿ ಲೆಕ್ಕಸೂತ್ರವನ್ನು ಬದಲಾಯಿಸಬೇಕು. ಕ್ಲಬ್ ಸದಸ್ಯತ್ವದ ನಿಯಮಗಳನ್ನು ಸಡಿಲಗೊಳಿಸಬೇಕು. ವಿಮಾ ಪ್ರತಿನಿಧಿಗಳ ಒಕ್ಕೂಟ ಪಾಲಿಸಿದಾರರ ಹಿತವನ್ನು ಕಾಪಾಡುವಲ್ಲಿ ಬದ್ಧವಾಗಿದೆ. ಸದಸ್ಯರು ಒಕ್ಕೂಟಕ್ಕೆ ಶಕ್ತಿ ತುಂಬಲು ಹೊಸ ಸದಸ್ಯರಿಗೆ ಸದಸ್ಯತ್ವವನ್ನು ನೀಡಬೇಕು. ಒಕ್ಕೂಟದಿಂದ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುತ್ತದೆ. ಇಂದು ಸರ್ಕಾರದಿಂದ ಒಕ್ಕೂಟ ಸವಲತ್ತು ಪಡೆಯಬೇಕಾದರೆ ಪ್ರತಿಯೊಬ್ಬರು ಸಂಘಟಿತರಾಗಬೇಕು ಎಂದರು.

ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕಲ್ಯಾಣ ಸಮಿತಿ ಅಧ್ಯಕ್ಷ ಸಿ.ಜಿ.ಲೋಕೇಂದ್ರ ಮಾತನಾಡಿ ಒಕ್ಕೂಟದಿಂದ ಪ್ರತಿನಿಧಿ ಮಿತ್ರರಿಗೆ ಸಿಗುವ ಸೌಲಭ್ಯಗಳು, ಹಕ್ಕು ಬಾಧ್ಯತೆಗಳು, ಕುಂದುಕೊರತೆ, ವೈದ್ಯಕೀಯ ಸೌಲಭ್ಯ, ಗ್ರಾಚ್ಯುಟಿ, ಗುಂಪು ವಿಮೆ ಇನ್ನಿತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಸದಸ್ಯರು ಭಿನ್ನಾಭಿಪ್ರಾಯ ಮರೆತು ಹೋರಾಟಗಳಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.

ಒಕ್ಕೂಟದ ವಿ. ರವೀಂದ್ರನಾಥ್, ಎಸ್.ಬಿ. ಶ್ರೀನಿವಾಸಚಾರಿ, ಡಾ. ಫ್ರೆಡ್ ಪಿಲೆಕ್ಸ್, ರವೀಂದ್ರ ರೆಡ್ಡಿ, ಡಿ. ರಾಮಚಂದ್ರ, ಎಂ.ಪಿ. ಶಶಿಧರ್, ಎಂ. ಜಗನ್ನಾಥ್, ಜೆ. ಜಗದೀಶ್, ಪಿ.ಆರ್. ಶ್ರೀಕುಮಾರ್, ಮಹಮ್ಮದ್ ಇಶಾಕ್, ಎಚ್.ಎಂ. ವಿರೂಪಾಕ್ಷಪ್ಪ ಇದ್ದರು. ದಿನವಿಡೀ ನಡೆದ ಸಮಾವೇಶದಲ್ಲಿ ವಿವಿಧ ಪ್ರದೇಶಗಳ ಜೀವ ವಿಮಾ ಪ್ರತಿನಿಧಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.