ADVERTISEMENT

ಎಂ.ಕೆ. ದೊಡ್ಡಿ ಲಾಕಪ್‌ ಡೆತ್ ಕೇಸ್: ನಾಲ್ವರು ಪೊಲೀಸರ ಅಮಾನತು

ಪೊಲೀಸ್ ಠಾಣೆಯಲ್ಲಿ ಲಾಕಪ್‌ ಡೆತ್ ಆರೋಪ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 17:57 IST
Last Updated 23 ಆಗಸ್ಟ್ 2025, 17:57 IST
<div class="paragraphs"><p>ರಮೇಶ್</p></div>

ರಮೇಶ್

   

ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಎಂ.ಕೆ. ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣದ ಆರೋಪಿಯ ಲಾಕಪ್‌ ಡೆತ್‌ ಆರೋಪಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಠಾಣೆಯ ಎಎಸ್‌ಐ ನಾಗರಾಜು, ಕಾನ್‌ಸ್ಟೆಬಲ್‌ಗಳಾದ ಲಕ್ಷ್ಮಿನಾರಾಯಾಣ, ಪ್ರತಾಪ್ ಹಾಗೂ ಸೋಮನಾಥ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅಮಾನತುಗೊಳಿಸಿದ್ದಾರೆ.

ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದುಂಡನಹಳ್ಳಿಯ ರಮೇಶ್ (59) ಶವ ಠಾಣೆಯ ಶೌಚಾಲಯದಲ್ಲಿ ಆ. 20ರಂದು ಬೆಳಗ್ಗಿನ ಜಾವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ‘ಪೊಲೀಸರೇ ಹೊಡೆದು ಸಾಯಿಸಿ ನೇಣು ಹಾಕಿದ್ದಾರೆ. ಇದು ಲಾಕಪ್‌ಡೆತ್‌’ ಎಂದು ರಮೇಶ್ ಕುಟುಂಬದವರು ಪೊಲೀಸರ ವಿರುದ್ಧ ನೇರ ಆರೋಪ ಮಾಡಿದ್ದರು.

ADVERTISEMENT

ಠಾಣೆಯಲ್ಲೇ ಸಂಭವಿಸಿದ್ದ ಸಾವಿನ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿತ್ತು. ಅದರ ಬೆನ್ನಲ್ಲೇ, ಘಟನೆ ನಡೆದ ದಿನದಂದು ಕರ್ತವ್ಯದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ನಿರ್ಲಕ್ಷ್ಯವಿಲ್ಲ ಎಂದಿದ್ದ ಎಸ್‌ಪಿ: ಆರೋಪಿ ರಮೇಶ್ ಸಾವಿಗೆ ಸಂಬಂಧಿಸಿದಂತೆ ಕುಟುಂಬದವರ ಲಾಕ್‌ಅಪ್ ಡೆತ್ ಆರೋಪ ಅಲ್ಲಗಳೆದಿದ್ದ ಎಸ್‌ಪಿ ಶ್ರೀನಿವಾಸ ಗೌಡ ಅವರು, ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಠಾಣೆ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

‘ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಶವದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಈ ವಿಷಯದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಿಲ್ಲ. ಶೌಚಾಲಯದಲ್ಲಿ ರಮೇಶ್ ನರಳಾಟದ ಶಬ್ದ ಕೇಳಿದಾಗ, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಬದುಕಿಸಲು ಪ್ರಯತ್ನಿಸಿದ್ದಾರೆ’ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು.

ಸಿಬ್ಬಂದಿ ಸಮರ್ಥಿಸಿಕೊಂಡಿದ್ದ ವಹಿಸಿದ್ದ ಎಸ್‌ಪಿ ಅವರು, ಕರ್ತವ್ಯಲೋಪದ ಆಧಾರದ ಮೇಲೆ ಅದೇ ಸಿಬ್ಬಂದಿಯನ್ನು ಅಮಾನತು ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದರೂ, ತನಿಖಾಧಿಕಾರಿಗಳು ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.