ADVERTISEMENT

ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು: ಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:51 IST
Last Updated 16 ಏಪ್ರಿಲ್ 2024, 5:51 IST
ಚನ್ನಪಟ್ಟಣದ ಡಿ.ಟಿ. ರಾಮ ಸರ್ಕಲ್ ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಪಕ್ಷದ ಅಭ್ಯರ್ಥಿ ಮಹಮದ್ ಮುಸಾದಿಕ್ ಪಾಷ ಅವರ ಪರವಾಗಿ ಪ್ರಚಾರ ನಡೆಸಿದರು.
ಚನ್ನಪಟ್ಟಣದ ಡಿ.ಟಿ. ರಾಮ ಸರ್ಕಲ್ ನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಪಕ್ಷದ ಅಭ್ಯರ್ಥಿ ಮಹಮದ್ ಮುಸಾದಿಕ್ ಪಾಷ ಅವರ ಪರವಾಗಿ ಪ್ರಚಾರ ನಡೆಸಿದರು.   

ಚನ್ನಪಟ್ಟಣ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಕೇವಲ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿರುವ ಎರಡೂ ಪಕ್ಷಗಳನ್ನು ಜನತೆ ರಾಜಕಾರಣದಿಂದ ದೂರವಿಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೆಆರ್‌ಎಸ್‌ ಅಭ್ಯರ್ಥಿ ಮಹಮದ್ ಮುಸಾದಿಕ್ ಪಾಷಾ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿ, ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ ಆಡಳಿತಕ್ಕಾಗಿ ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕುಕ್ಕರ್, ನಿಕ್ಕರ್, ಲಿಕ್ಕರ್‌ಗಳಿಗೆ ಮತ ಹಾಕುವುದನ್ನು ನಿಲ್ಲಿಸಬೇಕು. ಸಂಸದ ಡಿ.ಕೆ. ಸುರೇಶ್ 11 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಸಂಸದರಾದಾಗ ಅವರ ಆಸ್ತಿ ಹತ್ತಾರು ಕೋಟಿ ಇತ್ತು. ಈಗ ಅವರು ಘೋಷಿಸಿರುವ ಆಸ್ತಿಯೇ ₹ 500 ರಿಂದ ₹ 600 ಕೋಟಿ ಆಗಿದೆ. ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ಸಂಬಳ ಪಡೆಯುವ ಸಂಸದವರಿಗೆ ನೂರಾರು ಕೋಟಿ ಆಸ್ತಿ ಎಲ್ಲಿಂದ ಬಂತು ಎಂದು ಮತದಾರರು ಯೋಚಿಸಬೇಕು ಎಂದರು.

ADVERTISEMENT

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಸರ್ಕಾರಿ ವೈದ್ಯರಾಗಿದ್ದವರು. ಇವರು ₹ 100 ಕೋಟಿಗಳ ಒಡೆಯ. ಇಷ್ಟು ಆಸ್ತಿಯನ್ನು ಸಂಪಾದನೆ ಮಾಡಲು ಹೇಗೆ ಸಾಧ್ಯ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಜಿಲ್ಲಾಧ್ಯಕ್ಷ ಸುಧಾಕರ್, ಇತರ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.