
ಮಾಗಡಿ: ಪ್ರತಿ ವರ್ಷದಂತೆ ಮಾಗಡಿ ಹಾಗೂ ಕುದೂರು ಶ್ರೀ ಮಲೆ ಮಹದೇಶ್ವರ ಸ್ವಾಮಿ ಪಾದಯಾತ್ರೆ ಸಮಿತಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರು ಸೋಮವಾರ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಹೊರಟರು. ಕಳೆದ 20 ವರ್ಷಗಳಿಂದ ನೂರಾರು ಜನರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳುತ್ತಾರೆ.
ಮಾಗಡಿ ಜಡೇದೇವರ ಮಠದ ಇಮ್ಮಡಿ ಶ್ರೀಬಸವಲಿಂಗ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ದೇವರ ದರ್ಶನ ನೆಪದಲ್ಲಿ ಧನುರ್ ಮಾಸದಲ್ಲಿ ದೇವಾಲಯಗಳಿಗೆ ಕಾಲ್ನಡಿಗೆಯಲ್ಲಿ ತೆರಳುವುದು ಮನಸ್ಸಿನ ಹತೋಟಿಗೆ ನೆರವಾಗುತ್ತದೆ. ಜೀವನ ಸತ್ಯಮಾರ್ಗದ ದರ್ಶನವನ್ನು ತೆರೆದಿಡುತ್ತದೆ ಎಂದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವುದು ಒಂದು ಹೊಸ ಅನುಭೂತಿ. ಹೊಸ ಜೀವನ ದರ್ಶನದ ಅನುಭವವಾಗುತ್ತದೆ ಎಂದು ಪಾದಯಾತ್ರಿ ಸಮಿತಿ ಅಧ್ಯಕ್ಷ ರುದ್ರೇಶ್ ಅನುಭವ ಹಂಚಿಕೊಂಡರು.
ಪಾದಯಾತ್ರೆ ವೇಳೆ ಸಹ ಜೀವನ, ಸಹ ಭೋಜನದ ಮಹತ್ವ ಗೊತ್ತಾಗುತ್ತದೆ. ಪ್ರಕೃತಿಯಲ್ಲಿ ದೇವರನ್ನು ಕಾನುತ್ತೇವೆ ಎಂದು ಪಾದಯಾತ್ರೆ ಸಮಿತಿಯ ರಮೇಶ್ ಹಾಗೂ ಮಹೇಶ್ ಮಾತನಾಡಿ ಹೇಳಿದರು.
ಪಾದಯಾತ್ರಿಗಳಾದ ಉಮಾಮಹೇಶ್, ಮಹೇಶ್, ಶೋಭ ರಮೇಶ್, ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಲಲಿತಾ, ರೂಪ ಮಂಜುನಾಥ್, ಅನಿತಾ ದಯಾನಂದ್, ವನಜಾಕ್ಷಮ್ಮ, ಭೈರಕ್ಕ, ರೇಣುಕ, ಚಿನ್ನಿರಾಜು, ಮುತ್ತುರಾಜ್, ಹರೀಶ್, ದೇವಿಕ, ಸಂಜಯ್, ಪಾಲನೇತ್ರ, ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.