
ಮಾಗಡಿ: ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್.ಎನ್.ಅಶೋಕ್ ಅವರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸಿದ್ದಾರೆ.
2010ರಲ್ಲಿ ಒಂದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಂತರ ಸತತ ಮೂರು ಬಾರಿ
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಒಟ್ಟು 29 ಸೊಸೈಟಿಗಳಲ್ಲಿ ಪೈಕಿ ಮಾಗಡಿ ಕ್ಷೇತ್ರಕ್ಕೆ 19 ಹಾಗೂ ಸೋಲೂರಿಗೆ 10 ಸೊಸೈಟಿ ಸೇರಿಸಲಾಗಿದೆ.
ಈ ನಡುವೆ ಜೆಡಿಎಸ್ನಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇರಾದೆ ಇದ್ದರೂ ಅನುಮೋದಕರು ಹಾಗೂ ಸೂಚಕರು ಇಲ್ಲದ ಕಾರಣ ಜೆಡಿಎಸ್ ಪಾಳಯದವರು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ಎಚ್.ಎನ್.ಆಶೋಕ್ ಅವಿರೋಧವಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ.
ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ನಂತರ ರೈತರಿಗೆ ಬೆಳೆಸಾಲವಾಗಿ ತಾಲ್ಲೂಕಿಗೆ ₹200 ಕೋಟಿ ಹಾಗೂ ಕುರಿ, ಕೋಳಿ, ಹಂದಿ, ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ಸಾಲ, ಸ್ತ್ರೀಶಕ್ತಿ ಸಾಲವನ್ನಾಗಿ ₹50 ಕೋಟಿ ಮಂಜೂರು ಮಾಡಿಸಿ ಗ್ರಾಮೀಣ ಭಾಗದ ರೈತರ ದನಿಯಾಗಿದ್ದಾರೆ. ತಾಲ್ಲೂಕಿನಲ್ಲಿ ಮುಚ್ಚಿ ಹೋಗಿದ್ದ ಅನೇಕ ವಿಎಸ್ಎಸ್ಎನ್ ಸಂಘಗಳನ್ನು ಮರು ಪ್ರಾರಂಭಿಸಿ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ.
ತಾಲ್ಲೂಕಿನಲ್ಲಿ ಸಹಕಾರಿ ರಂಗವನ್ನು ಬಲಿಷ್ಠವಾಗಿ ಕಟ್ಟಿ ರೈತರಿಗೆ ಸಹಕಾರಿಯನ್ನಾಗಿಸಿರುವ ಅವರ ಸೇವೆಯನ್ನು ಸರ್ಕಾರ ಗುರುತಿಸಿ ಕಳೆದ ವಾರ ‘ಸಹಕಾರಿ ರತ್ನ‘ ಪ್ರಶಸ್ತಿ ನೀಡಿ ಗೌರವಿಸಿದೆ.
ನಾಲ್ಕನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಅಶೋಕ್ ಟಿಎಪಿಸಿಎಂಎಸ್ ಅಧ್ಯಕ್ಷ
ಎಚ್.ಆರ್.ಶಿವಪ್ರಸಾದ್, ಯುವ ಅಧ್ಯಕ್ಷ ವಿನಯ್, ರಾಘವೇಂದ್ರ, ಮುನಿರಾಜು, ಜಗದೀಶ್, ಗೋವಿಂದರಾಜು, ದೇವೇಂದ್ರ ಕುಮಾರು, ಧನುಷ್, ಮೂರ್ತಿ ಇತರರು ಇದ್ದರು.
ಮಾಗಡಿ ತಾಲ್ಲೂಕು ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅಭಿವೃದ್ಧಿ ಪಡೆಯುತ್ತಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು. ಇದಕ್ಕಾಗಿ ಶ್ರಮಿಸುವೆ
- ಎಚ್.ಎನ್.ಅಶೋಕ್ ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.