ಮಾಗಡಿ: ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ಬುಧವಾರ ಇಲ್ಲಿನ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಳಿಕ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಸಹಾಯಕ ನಿರ್ದೇಶಕರಿಂದ ಪಶು ಆಸ್ಪತ್ರೆ ಸ್ಥಳಾಂತರವಾಗುವ ಕುರಿತು ಮಾಹಿತಿ ಪಡೆದರು.
ಕುಣಿಗಲ್ನ ಕುದುರೆ ಫಾರ್ಮ್ಗೆ ಬುಧವಾರ ಭೇಟಿ ನೀಡಿದ್ದ ಸಚಿವ ಕೆ. ವೆಂಕಟೇಶ್ ಅವರು ಬೆಂಗಳೂರಿಗೆ ತೆರಳುವಾಗ ಮಾಗಡಿಗೆ ಭೇಟಿ ನೀಡಿದರು. ಈ ವೇಳೆ ಮಾಗಡಿಯಲ್ಲಿ ಹೊಸದಾಗಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವ ಕಾರಣ ಪಟ್ಟಣದಲ್ಲಿರುವ ಪಶು ಆಸ್ಪತ್ರೆಯು ಬೈಚಾಪುರದ ರೇಷ್ಮೆ ಇಲಾಖೆ ಕಚೇರಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
ಪಶು ಸಂಗೋಪನೆ ಇಲಾಖೆಯಿಂದ ಪತ್ರ ಕಳುಹಿಸಿ, ಬೈಚಾಪುರದ ಬಳಿ ಸ್ಥಳಾಂತರವಾಗುವ ಹೊಸ ಕಟ್ಟಡಕ್ಕೆ ರೇಷ್ಮೆ ಇಲಾಖೆಯಿಂದ 6 ಗುಂಟೆ ಜಾಗವನ್ನು ಪಶು ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದರು.
ಸಚಿವ ವೆಂಕಟೇಶ್ ಅವರು ಮಾಗಡಿಗೆ ಬರುತ್ತಿರುವ ವಿಚಾರ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ, ಅವರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆ ಘಳಿಗೆಯಲ್ಲಿ ಸಚಿವರು ಬರುತ್ತಿರುವ ಮಾಹಿತಿ ಪಡೆದ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ತಹಶೀಲ್ದಾರ್ ಶರತ್ ಕುಮಾರ್ ಜನಸ್ಪಂದನೆ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಸಚಿವರ ಸ್ವಾಗತಕ್ಕೆ ತೆರಳಿದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ಮಾತನಾಡಿ, ‘ನಾನು ಹೊಸದಾಗಿ ಸಹಾಯಕ ನಿರ್ದೇಶನಕನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈಗ ಪಶು ಆಸ್ಪತ್ರೆ ಸ್ಥಳಾಂತರವಾಗುತ್ತಿದೆ. ರೇಷ್ಮೆ ಇಲಾಖೆ ಆವರಣದಲ್ಲಿನ ಜಾಗದಲ್ಲಿ ಪಶು ಸಂಕೀರ್ಣ, ಪಾಲಿ ಕ್ಲಿನಿಕ್, ಲ್ಯಾಬೊರೇಟರಿ, ಹೊರರೋಗಿ ವಿಭಾಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಈ ವೇಳೆ ಪಶು ಆಸ್ಪತ್ರೆ ಇಲಾಖೆ ನಿರ್ದೇಶಕ ಡಾ. ಪಿ.ಶ್ರೀನಿವಾಸ್, ಹೆಚ್ಚುವರಿ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ, ಡಾ.ಜಯಶ್ರೀ, ತಹಶೀಲ್ದಾರ್ ಶರತ್ ಕುಮಾರ್, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ವೆಂಕಟೇಶ್, ನರಸಿಂಹಮೂರ್ತಿ, ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.