ರಾಮನಗರ: ‘ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ, ರೈತರು ಹೆಚ್ಚಿನ ಲಾಭ ಗಳಿಸಬಹುದು. ಈ ನಿಟ್ಟಿನಲ್ಲಿ ನಮ್ಮ ರೈತರಿಗೆ ಕಾಲಕ್ಕೆ ತಕ್ಕಂತೆ ಹೈನುಗಾರಿಕೆಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ ಅರಿವು ಅಗತ್ಯ’ ಎಂದು ಬಮೂಲ್ ನಿರ್ದೇಶಕ ಪಿ. ನಾಗರಾಜು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದಿಂದ ಗುಜರಾತ್ಗೆ ಅಧ್ಯಯನ ಪ್ರವಾಸ ಕೈಗೊಂಡಿರುವ ರಾಮನಗರ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳ ವಾಹನಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಹಾಲು ಶೇಖರಣೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ವಿಧಾನಗಳ ಬಗ್ಗೆ ತಿಳಿಯುವ ಉದ್ದೇಶದಿಂದ ಗುಜರಾತ್ಗೆ ರಾಮನಗರ ತಾಲ್ಲೂಕಿನ ಕಾರ್ಯನಿರ್ವಾಹಕರನ್ನು ಕಳಿಸಿ ಕೊಡಲಾಗುತ್ತಿದೆ. ಇದರಿಂದ ರೈತರಿಗೆ ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಹೈನುಗಾರಿಕೆ ನಡೆಯುತ್ತಿದೆ, ಅವರಿಂದ ತಾವು ಕಲಿಯಬೇಕಾದ್ದೇನು ಎಂಬುದು ಗೊತ್ತಾಗುತ್ತದೆ’ ಎಂದರು.
‘ಪ್ರತಿ ವರ್ಷ ಒಂದು ತಾಲ್ಲೂಕಿನಿಂದ ಒಮ್ಮೆ ಕಾರ್ಯನಿರ್ವಾಹಕರು, ಮತ್ತೆರಡು ಸಲ ಆಡಳಿತ ಮಂಡಳಿ ಅಧ್ಯಕ್ಷರುಗಳು ಸೇರಿದಂತೆ ಮೂರು ತಂಡಗಳನ್ನು ಬಮೂಲ್ ವತಿಯಿಂದ ಕಳಿಸಲಾಗುತ್ತಿದೆ. ರಾಮನಗರ ತಾಲ್ಲೂಕಿನ ಕೈಲಾಂಚ, ಕಸಬಾ, ಕೂಟಗಲ್, ಬಿಡದಿ ಹೋಬಳಿಗಳಿಂದ ಸುಮಾರು 32 ಸಂಘಗಳ ಮುಖ್ಯಕಾರ್ಯನಿರ್ವಾಹಕರು ಅಧ್ಯಯನ ಪ್ರವಾಸಕ್ಕೆ ತೆರಳುತ್ತಿದ್ದಾರೆ’ ಎಂದು ತಿಳಿಸಿದರು.
ಬಮೂಲ್ ಶಿಬಿರ ಉಪ ವ್ಯವಸ್ಥಾಪಕ ಡಾ. ಜಿ.ಟಿ. ಗಣೇಶ್, ಮೇಲ್ವಿಚಾರಕರಾದ ಉಮೇಶ್, ವೆಂಕಟೇಶ್, ಯತೀಶ್, ರವೀಶ್ ಕಾರ್ಯನಿರ್ವಾಹಕರಾದ ಸತೀಶ್, ಅರ್ಕೇಶ್, ಪ್ರಕಾಶ್, ಯೋಗಾನಂದ್, ಬೆಟ್ಟಯ್ಯ, ತ್ರಿಪುರಯ್ಯ, ನರಸಿಂಹಯ್ಯ, ಪ್ರೇಮ್, ಹರೀಶ್, ರಾಮಕೃಷ್ಣಯ್ಯ, ಗಂಗಾಧರ್, ಕುಮಾರ್, ಸಿದ್ದೇಗೌಡ, ಲೋಕೇಶ್ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.