ಚನ್ನಪಟ್ಟಣ: ಅಪ್ರತಿಮ ದೇಶಪ್ರೇಮಿ ನೇತಾಜಿ ಸುಭಾಷ್ ಚಂದ್ರ ಬೋಸ್. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಸಮರೋಪಾದಿಯಲ್ಲಿ ಕೈಗೊಂಡ ಹೋರಾಟ ಬ್ರಿಟಿಷರ ಎದೆ ನಡುಗಿಸಿತ್ತು ಎಂದು ಸಾಹಿತಿ ವಿಜಯ್ ರಾಂಪುರ ಬಣ್ಣಿಸಿದರು.
ತಾಲ್ಲೂಕಿನ ವಂದಾರಗುಪ್ಪೆ ಬಳಿ ಹೊಂಬೇಗೌಡ ಐಟಿಐ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಬೋಸ್ ಅವರ ಗೌರವಾರ್ಥ ಈ ದಿನವನ್ನು ಸಾಮಾಜಿಕ ನ್ಯಾಯ ಮತ್ತು ಶೂರತೆ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿ ದಿಸೆಯಲ್ಲಿಯೇ ದೇಶಸೇವೆ ಹಂಬಲ ಹೊತ್ತು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟದ ಹಾದಿ ತುಳಿದರು. ಅದಕ್ಕಾಗಿ ತಮ್ಮ ಹುದ್ದೆ ತ್ಯಜಿಸಿ ತಮ್ಮದೇ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿ ತನ್ನ ಕ್ರಾಂತಿಕಾರಿ ಭಾಷಣಗಳಿಂದ ಭಾರತೀಯ ಯುವಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದರು ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ನೀಡುವ ಸಲುವಾಗಿ, ದೇಶ–ವಿದೇಶಗಳನ್ನು ಸುತ್ತಿ ತಮ್ಮ ಸೈನ್ಯ ಸಕ್ರಿಯಗೊಳಿಸುತ್ತಿದ್ದರು. ಭಾರತದ ಯುವ ತಲೆಮಾರಿಗೆ ಸ್ಫೂರ್ತಿಯಾಗಿರುವ ಬೋಸ್ ಅವರ ತ್ಯಾಗ ಮತ್ತು ಬಲಿದಾನ ಮಾದರಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊಂಬೇಗೌಡ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಮಹೇಶ್ ಚಂದ್ರ ಮಾತನಾಡಿ, ಈ ಜಗತ್ತು ಕಂಡ ಅಪ್ರತಿಮ ದೇಶಪ್ರೇಮಿ ಸುಭಾಷ್ ಚಂದ್ರ ಬೋಸ್. ಕೋಟ್ಯಂತರ ಭಾರತೀಯರ ಹೃದಯದಲ್ಲಿ ಅಮರರಾಗಿದ್ದಾರೆ ಎಂದರು.
ಪ್ರಾಂಶುಪಾಲ ಡಿ.ಪಿ.ಶಂಕರಲಿಂಗೇಗೌಡ ಮಾತನಾಡಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಎಲ್.ಎಂ.ಮರಿದೇವರು, ಡಿ.ಎಸ್.ಶಿಖರೇಶ್ ಮಾತನಾಡಿದರು. ಉಪನ್ಯಾಸಕ ಶಂಕರ್, ರಜನಿ, ಸುಧಾ, ರೇಣುಕಾರಾಧ್ಯ, ಸಿಬ್ಬಂದಿ ಮುನೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.