ಮಾಗಡಿ: ಶಾಸಕ ಬಾಲಕೃಷ್ಣ ಕುಟುಂಬದ ಮೇಲೆ ಮಾಜಿ ಶಾಸಕ ಎ.ಮಂಜುನಾಥ್ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಾಲಕೃಷ್ಣ ಅವರು ವಾಮಮಾರ್ಗದಲ್ಲಿ ಸಹಕಾರಿ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.
ಕೆಂಪೇಗೌಡರ ಮನೆತನಕ್ಕೆ ಸಹಾಯ ಮಾಡಿದ್ದು ಬಾಲಕೃಷ್ಣ ಹೊರತು; ಮಂಜುನಾಥ್ ಅವರು ಅಲ್ಲ. ಕೆಂಪೇಗೌಡರ ಕುಟುಂಬ ಮತ್ತು ಬಾಲಕೃಷ್ಣ ಅವರ ನಡುವೆ ಬಿರುಕು ಮೂಡಿಸಲು ಹೊರಟಿದ್ದಾರೆ ಎಂದರು.
ಬೆಟ್ಟಸ್ವಾಮಿಗೌಡರ ಕುಟುಂಬಕ್ಕೂ ಬಾಲಕೃಷ್ಣ ಅವರು ರಾಜಕೀಯವಾಗಿ ನೆರವು ನೀಡಿದ್ದಾರೆ. ಇದನ್ನು ಮಂಜುನಾಥ್ ಅವರು ಮರೆತಿರಬಹುದು ಎಂದರು.
ಬಮೂಲ್ ನಿರ್ದೇಶಕ ಸ್ಥಾನದ ಅಭ್ಯರ್ಥಿ ಎಚ್.ಎನ್ ಅಶೋಕ್ ಮಾತನಾಡಿ, ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಗಡಿಯಲ್ಲಿ ನಡೆದ ₹600 ಕೋಟಿ ಹಗರಣದಲ್ಲಿ ಬಾಲಕೃಷ್ಣ ಅವರ ಹೆಸರು ಸುಖಾಸುಮ್ಮನೆ ಮಂಜುನಾಥ್ ಎಳೆದು ತರುತ್ತಿದ್ದಾರೆ. ರಾಜಕೀಯವಾಗಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಜೆ.ಪಿ.ಚಂದ್ರೇಗೌಡ, ಕುಮಾರ್, ಪಾಪಣ್ಣಿ, ನರೇಂದ್ರ, ಶಿವಣ್ಣ, ಮಂಜುನಾಥ್,ಅಜ್ಜನಹಳ್ಳಿ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.