ADVERTISEMENT

‘ಬುಡಕಟ್ಟು ಸಮುದಾಯದ ಅಧ್ಯಯನ ಅಗತ್ಯ’

ವಿದ್ಯಾರ್ಥಿಗಳಿಂದ ಇರುಳಿಗ ಸಮುದಾಯ ಕುರಿತ ಕ್ಷೇತ್ರ ಕಾರ್ಯ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:15 IST
Last Updated 20 ಮೇ 2019, 13:15 IST
ಕೂಟಗಲ್ ಬಳಿಯ ಇರುಳಿಗ ಸಮುದಾಯದ ಜನರ ಬಳಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಂಡರು
ಕೂಟಗಲ್ ಬಳಿಯ ಇರುಳಿಗ ಸಮುದಾಯದ ಜನರ ಬಳಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಂಡರು   

ರಾಮನಗರ: ಬೆಂಗಳೂರಿನ ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಇಲ್ಲಿನ ರಾಮದೇವರಬೆಟ್ಟದ ಇರುಳಿಗರ ಕಾಲೊನಿ, ಕೂಟಗಲ್ ಬಳಿಯ ಇರುಳಿಗರ ಕಾಲೊನಿ ಹಾಗೂ ಯರೇಹಳ್ಳಿ ಬಳಿ ವಾಸವಾಗಿರುವ ಇರುಳಿಗ ಸಮುದಾಯಗಳ ಕುರಿತ ಕ್ಷೇತ್ರ ಕಾರ್ಯವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

‘ಬುಡಕಟ್ಟು ಸಮುದಾಯಗಳ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಪರಿಣಾಮಕಾರಿ ಕ್ಷೇತ್ರಕಾರ್ಯ ಅಗತ್ಯವಾಗಿದೆ. ಬುಡಕಟ್ಟು ಜನರ ಸಂಸ್ಕೃತಿ, ಆಚಾರ–ವಿಚಾರ, ಆಹಾರ ಹಾಗೂ ಕೃಷಿ ಪದ್ಧತಿಯಲ್ಲಿ ದೊಡ್ಡ ಪರಿವರ್ತನೆಯಾಗಿದೆ. ಈಚಿನ ಆಧುನೀಕರಣ, ಜಾಗತಿಕರಣದಿಂದ ಬುಡಕಟ್ಟು ಸಮುದಾಯಗಳ ನೆಲೆಗಳು ಅಲ್ಲೋಲ ಕಲ್ಲೋಲವಾಗಿವೆ’ ಎಂದು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಟಿ. ಯಲ್ಲಪ್ಪ ತಿಳಿಸಿದರು.

‘ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಬುಡಕಟ್ಟು ಜನರು ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಬದಲಾಗಿ ಅವರು ಅರಣ್ಯದಲ್ಲಿ ಸಿಗುವ ಔಷಧಯುಕ್ತ ಸಸ್ಯಗಳನ್ನೇ ಅವಲಂಬಿಸಿದ್ದಾರೆ. ಇಂಥ ಜನರು ವಾಸಿಸುವ ಸ್ಥಳಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ವಿವಿಧ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲೂ ಎಲ್ಲರೂ ಚಿಂತನೆ ನಡೆಸಬೇಕು’ ಎಂದರು.

ADVERTISEMENT

ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಚ್.ವಿ ಅಂಜನರೆಡ್ಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಕ್ಷೇತ್ರಕಾರ್ಯ ಅಗತ್ಯವಾಗಿದೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮೂಡುವ ಹೊಳಹುಗಳಿಂದ ಕೆಲವು, ಹೊಸ ಸಿದ್ಧಾಂತ, ಪರಿಕಲ್ಪನೆಗಳನ್ನು ರೂಪಿಸಿಕೊಂಡು, ಅವುಗಳ ಸ್ವರೂಪ, ಮಹತ್ವವನ್ನು ವಿವರಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಬುಡಕಟ್ಟುಗಳನ್ನು ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನಗಳು ಪ್ರಾರಂಭವಾದಾಗಿನಿಂದ ಈ ಕ್ಷೇತ್ರದಲ್ಲಿ ಈತನಕ ಬೆರಗುಗೊಳಿಸುವಷ್ಟು ಬೆಳವಣಿಗೆ ಕಂಡುಬಂದಿದೆ. ಇದನ್ನು ಕುರಿತಂತೆ ಸಾಕಷ್ಟು ಗಂಭೀರ ಚಿಂತನೆಗಳು ಇನ್ನು ಹೊರಬರಬೇಕಿದೆ ಎಂದರು.

ಕಾಲೇಜಿನ ಸಹಪ್ರಾಧ್ಯಾಪಕ ಡಾ.ಜಿ. ರವಿ ಮಾತನಾಡಿ, ಜನರ ನಡವಳಿಕೆ-ನಂಬಿಕೆಗಳು, ಸಂಪ್ರದಾಯ-ಆಚರಣೆಗಳು, ಮೌಖಿಕ-ಗ್ರಾಂಥಿಕ ಸಾಹಿತ್ಯ ಸಂವೇದನೆಗಳು ಸಂಸ್ಕೃತಿಯ ಅಧ್ಯಯನಕ್ಕೆ ಅವಕಾಶ ತೆರೆದಿಡುತ್ತವೆ. ಇಂಥ ಅರ್ಥಪೂರ್ಣ ಅಧ್ಯಯನಕ್ಕೆ ರಾಮನಗರ ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯಗಳು ಉತ್ತಮ ಗ್ರಾಸ ಒದಗಿಸಿಕೊಡುತ್ತವೆ. ಬುಡಕಟ್ಟು ಸಮುದಾಯಗಳಲ್ಲಿ ಕಂಡು ಬರುವ ಈ ಎಲ್ಲಾ ವೈಶಿಷ್ಟ್ಯ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಗುರುತಿಸಿ ಅಧ್ಯಯನ ಮಾಡಬೇಕು ಎಂದರು.

ಇರುಳಿಗ ಸಮುದಾಯದ ಹೋರಾಟಗಾರ ಕೃಷ್ಣಮೂರ್ತಿ ಮಾತನಾಡಿ ಜಿಲ್ಲೆಯಲ್ಲಿ ಇರುಳಿಗರು, ಹಕ್ಕಿಪಿಕ್ಕಿಯರು, ಸಿಳ್ಳೇಕ್ಯಾತರು, ಮೇದರು, ಕಾಡುಕುರುಬರು, ಲಂಬಾಣಿ ಸೋಲಿಗ, ಕೊರಮ, ಜೇನುಕುರುಬ ಸಮುದಾಯಗಳ ಜನರು ವಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಎಸ್.ಟಿ. ತ್ಯಾಗರಾಜ್, ಪ್ರೊ. ಡಿ. ರಾಜಣ್ಣ, ಪ್ರೊ. ರಾಜೇಂದ್ರ, ಡಾ. ನೇತ್ರಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.