ADVERTISEMENT

ಮಧ್ಯಪ್ರದೇಶ ಕಾರ್ಮಿಕರನ್ನು ಕಳುಹಿಸಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 10:30 IST
Last Updated 4 ಮೇ 2020, 10:30 IST
ಅಂಬೇಡ್ಕರ್ ಭವನದಲ್ಲಿ ಆಶ್ರಯ ಪಡೆದ ಕಾರ್ಮಿಕರು
ಅಂಬೇಡ್ಕರ್ ಭವನದಲ್ಲಿ ಆಶ್ರಯ ಪಡೆದ ಕಾರ್ಮಿಕರು   

ರಾಮನಗರ: ಇಲ್ಲಿನ ಅಂಬೇಡ್ಕರ್ ಭವನ ಹಾಗೂ ಹಾಜಿ ನಗರದಲ್ಲಿ ಇರುವ ತಾತ್ಕಾಲಿಕ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಧ್ಯಪ್ರದೇಶದ26 ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ.

ಇದಕ್ಕಾಗಿ ಸೇವಾ ಸಿಂಧು ವೆಬ್‌ಸೈಟ್‌ಗೆ ಕಾರ್ಮಿಕರ ಮಾಹಿತಿ ಅಪ್‌ಲೋಡ್ ಮಾಡುವ ಕೆಲಸ ಭಾನುವಾರ ಜರುಗಿತು. ಇದರೊಂದಿಗೆ ರಾಜಸ್ತಾನದ ಒಬ್ಬ ಕಾರ್ಮಿಕನ ಮಾಹಿತಿಯನ್ನೂ ನೀಡಲಾಯಿತು. ಲಾಕ್‌ಡೌನ್ ತೆರವಾದ ಕೂಡಲೇ ಇವರನ್ನು ಮೂಲ ಸ್ಥಾನಗಳಿಗೆ ಕಳುಹಿಸಿಕೊಡುವ ಜವಾಬ್ದಾರಿ ಸ್ಥಳೀಯ ಆಡಳಿತಕ್ಕೆ ನೀಡಲಾಗಿದೆ.

ಕೊರೊನಾ ಸಂಬಂಧಿತ ಕಾರ್ಮಿಕರ ಮಾಹಿತಿಗೆ ಸರ್ಕಾರ ಈ ವೆಬ್‌ಸೈಟ್‌ ರೂಪಿಸಿದ್ದು ಇದರಲ್ಲಿ ಪ್ರತಿ ನಿರಾಶ್ರಿತನ ಹೆಸರು, ಲಿಂಗ, ವಯಸ್ಸು , ಆಧಾರ್ ಸಂಖ್ಯೆ, ಮತ್ತು ಇರುವ ಸ್ಥಳ ಮತ್ತು ಮೂಲ ಸ್ಥಾನದ ಕುರಿತು ಮಾಹಿತಿ ನೀಡಲಾಗಿದೆ. ಇವರನ್ನು ಮೂಲ ಸ್ಥಾನಕ್ಕೆ ಕಳುಹಿಸುವ ದಿನಾಂಕ ಮತ್ತು ಸಮಯವನ್ನು ಸರ್ಕಾರವೇ ನಿಗದಿ ಮಾಡಲಿದೆ.

ADVERTISEMENT

ಉದ್ಯೋಗ ಅರಸಿ 27 ಮಂದಿಯೂ ಚನ್ನಪಟ್ಟಣದ ಕೆಂಗಲ್‌ಗೆ ಆಗಮಿಸಿದ್ದರು. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಸಂದರ್ಭ ಮಾರ್ಚ್‌ 30ರಂದು ರಾಮನಗರದ ಐಜೂರು ಪೊಲೀಸರು ರಕ್ಷಣೆ ಮಾಡಿದ್ದರು. ನಂತರ ನಗರಸಭೆ ವತಿಯಿಂದ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯದ 11 ಮಂದಿ

ಇವರೊಂದಿಗೆ ರಾಜ್ಯದ 11ಮಂದಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಒಬ್ಬರು, ಬಾಗಲಕೋಟೆ 1, ಮೈಸೂರಿನ 3, ಮಂಡ್ಯದ ಒಬ್ಬರು ಇದ್ದಾರೆ. ಸ್ಥಳೀಯರನ್ನು ಸೋಮವಾರವೇ ಸ್ವತಃ ಊರಿಗೆ ಕಳುಹಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.